ಉದಯವಾಹಿನಿ, ಬೀದರ್: ಕಳ್ಳತನ ಮಾಡುವವರಿಗೆ ಅದರ ಬಗ್ಗೆ ಗೊತ್ತಿರುತ್ತದೆ. ಅದೇ ರೀತಿ ರಾಹುಲ್ ಗಾಂಧಿ ಅವರನ್ನು ತಪಾಸಣೆ ಮಾಡಿದ್ರೆ ಮತಗಳ್ಳತನದ ಬಗ್ಗೆ ಎಲ್ಲ ತಿಳಿಯುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮತದಾರರ ಹೆಸರು ಡಿಲೀಟ್, ರಾಹುಲ್ ಗಾಂಧಿ ಆರೋಪದ ಬಗ್ಗೆ ಮಾತನಾಡಿದ ಅವರು, ಲೋಕಸಭಾ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿಗೆ ಸಾಮಾನ್ಯಜ್ಞಾನ ಇಲ್ಲ. ಕಳ್ಳತನ ಮಾಡುವವರಿಗೆ ಕಳ್ಳತನದ ಬಗ್ಗೆ ಗೊತ್ತಿರುತ್ತದೆ. ಅದೇ ರೀತಿ ರಾಹುಲ್ ಗಾಂಧಿ ಅವರನ್ನು ತಪಾಸಣೆ ಮಾಡಿದ್ರೆ ಮತಗಳ್ಳತನದ ಬಗ್ಗೆ ಎಲ್ಲ ತಿಳಿಯುತ್ತದೆ ಎಂದು ಕಿಡಿಕಾರಿದರು.
ಮಾಲೂರು ಕಾಂಗ್ರೆಸ್ ಶಾಸಕರನ್ನ ಕೋರ್ಟ್ ಅಸಿಂಧೂಗೊಳಿಸಿದ್ದು ಯಾಕೆ? ಇದಕ್ಕೆ ರಾಹುಲ್ ಗಾಂಧಿ ಉತ್ತರ ನೀಡಬೇಕು. ಮೋಸ ಮಾಡಿದವರು ಯಾರು? ಕಾಂಗ್ರೆಸ್ ಮೋಸ ಮಾಡಿ 135 ಸ್ಥಾನ ಗೆದ್ದವರು. ಆಳಂದದಲ್ಲಿ ಕಾಂಗ್ರೆಸ್ ಅಭ್ಯರ್ಥಿನೇ ಗೆದ್ದಿದ್ದು. ಸಿದ್ದರಾಮಯ್ಯರ ಕ್ಷೇತ್ರದಲ್ಲೂ ಮನೆ ನಂ. ಸೊನ್ನೆ ಅಂತಲೇ ತೋರಿಸುತ್ತದೆ. 20-25ರ ಮತದಾರರ ಪಟ್ಟಿ ನೋಡಿದ್ರೆ ಈಗಲೂ ಸೊನ್ನೆ ಅಂತಲೇ ಮನೆ ನಂ. ಇದೆ. ಮಹದೇವಪುರದಲ್ಲೂ ರಾಹುಲ್ ಗಾಂಧಿ ಆರೋಪ ಮಾಡಿದರು. ಬಾಡಿಗೆ ಮನೆಯಲ್ಲಿ ಇದ್ದವರು, ಮನೆ ನಂಬರ್ ಎ,ಬಿ,ಸಿ,ಡಿ ಅಂತ ಮಾಡಿರುತ್ತಾರೆ. ಮನೆ ನಂಬರ್ ಸರಿಯಾಗಿ ಫೀಡ್ ಆಗಿರಲ್ಲ, ಡಾಟಾ ಆಪರೇಟರ್ ಸರಿಯಾಗಿ ಫೀಡ್ ಮಾಡಿರಲ್ಲ. ಮನೆ ನಂಬರ್ ಎಬಿಸಿಡಿ ಹಾಕಿದ್ರೆ ತೊಗೊಳಲ್ಲ. ಆಗ ಸೊನ್ನೆ ಹಾಕ್ತಾರೆ ಎಂದರು.
