ಉದಯವಾಹಿನಿ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ರಸ್ತೆಗುಂಡಿಗಳಿಂದಾಗಿ ಗುಂಡಿಯೂರು ಅಂತ ರಾಷ್ಟ್ರಮಟ್ಟದಲ್ಲಿ ಸದ್ದುಮಾಡುತ್ತಿದೆ. ಈ ಬಗ್ಗೆ ಪಬ್ಲಿಕ್ ಟಿವಿ ಅಭಿಯಾನದ ಬೆನ್ನಲ್ಲೇ ಸಿಎಂ, ಡಿಸಿಎಂ ನಗರ ಪ್ರದಕ್ಷಿಣೆ ನಡೆಸಿದ್ದಾರೆ. ಬೆಂಗಳೂರಿನ ಬಳ್ಳಾರಿ ರಸ್ತೆಯ ವಿಂಡ್ಸರ್ ಮ್ಯಾನರ್ ವೃತ್ತ, ಹೆಬ್ಬಾಳ ಫ್ಲೈಓವರ್ ರಸ್ತೆಯಲ್ಲಿ ಸಿಎಂ ಪರಿಶೀಲನೆ ನಡೆಸಿದ್ದಾರೆ. ಹೆಬ್ಬಾಳ ಫ್ಲೈಓವರ್ ರಸ್ತೆಯಲ್ಲಿ ರಸ್ತೆಯಲ್ಲಿ ಕಸ ಡಂಪ್ ಮಾಡಿದ್ದಕ್ಕೆ ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಣ್ಣೂರು-ಬಾಗಲೂರು ರಸ್ತೆ ವೈಟ್ ಟ್ಯಾಪಿಂಗ್ ಕೂಡ ಪರಿಶೀಲನೆ ನಡೆಸಿದ್ದಾರೆ.
ಸಿಟಿ ರೌಂಡ್ಸ್ ಬಳಿಕ ಮಾತನಾಡಿದ ಸಿಎಂ, 16 ಸಾವಿರ ಗುಂಡಿಗಳಲ್ಲಿ 4 ಸಾವಿರ ಮಾತ್ರ ಬಾಕಿ ಇದೆ. ಎಲ್ಲೆಲ್ಲಿ ಗುಂಡಿಗಳು ಇದೆಯೋ ಅಲ್ಲೆಲ್ಲಾ ಮುಚ್ಚಲು ಸೂಚನೆ ನೀಡಿದ್ದೇನೆ. ಗುಂಡಿಗಳಿಗೆ ಜಲ್ಲಿ ಹಾಕಿ ಟಾರ್ ಹಾಕದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ನ ಅಮಾನತು ಮಾಡಿದ್ದೇನೆ. ಹೆಣ್ಣೂರು ರಸ್ತೆ ವೈಟ್ ಟ್ಯಾಪಿಂಗ್ ಆಗಿದೆ. ಪ್ರತಿ ಕಿಲೋ ಮೀಟರ್ ರಸ್ತೆಗೆ 13 ಕೋಟಿ ರೂ. ಕೊಡುತ್ತಿದ್ದೇವೆ. ಬಿಜೆಪಿಯವರು ಗುಂಡಿಗಳು ಮುಚ್ಚಿದ್ರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ.
ಡಿಸಿಎಂ ಡಿಕೆಶಿ ಕನಕಪುರ ಪ್ರವಾಸಕ್ಕೆ ತೆರಳುವಾಗ ಮಾರ್ಗಮಧ್ಯದಲ್ಲಿ ಬೆಂಗಳೂರಿನ ಮಾಗಡಿ ರಸ್ತೆಯ ಸುಮನಹಳ್ಳಿ ಮೇಲ್ಸೇತುವೆ ರಸ್ತೆ ದುರಸ್ತಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದ್ದಾರೆ.
