ಉದಯವಾಹಿನಿ, ಬೆಂಗಳೂರು: ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಸಾಲು ಸಾಲು ರಜೆಗಳು ಬರ್ತಿವೆ. ಇಂತಹ ಹಬ್ಬದ ಸಂದರ್ಭ ಅಥವಾ ವಿಕೆಂಡ್ಗಳಲ್ಲಿ ಮೆಜೆಸ್ಟಿಕ್ನಲ್ಲಿ ಭಾರೀ ಜಾಮ್ ಉಂಟಾಗಿರುತ್ತದೆ. ಅದರಲ್ಲೂ ಖಾಸಗಿ ಬಸ್ಗಳನ್ನಂತೂ ಮೆಜೆಸ್ಟಿಕ್ ಸುತ್ತಮುತ್ತ ಎಲ್ಲೆಂದರಲ್ಲಿ ನಿಲ್ಲಿಸಿರುತ್ತಿದ್ದರು. ಈ ಅಕ್ರಮ ನಿಲುಗಡೆಗೆ ಕಡಿವಾಣ ಹಾಕೋ ನಿಟ್ಟಿನಲ್ಲಿ ಟ್ರಾಫಿಕ್ ಪೊಲೀಸರು ಪ್ರೈವೇಟ್ ಬಸ್ ನಿಲುಗಡೆಗೆ ಸಮಯ ನಿಗದಿ ಮಾಡಿದ್ದಾರೆ.
ಯಾವುದೇ ಊರಿನಿಂದ ಬೆಂಗಳೂರಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಬಂದ್ರೆ ಮೊದಲು ಇಳಿಯೋದೇ ಮೆಜೆಸ್ಟಿಕ್ನಲ್ಲಿ. ಬೆಂಗಳೂರಿನ ಹೃದಯ ಭಾಗದಲ್ಲಿರೋ ಮೆಜೆಸ್ಟಿಕ್ ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿ ಖಾಸಗಿ ಬಸ್ಗಳು ಸಾಲುಗಟ್ಟಿ ನಿಂತಿರುತ್ತವೆ. ಇದರಿಂದಾಗಿ ಜನ ಹಾಗೂ ವಾಹನ ಸವಾರರು ಭಾರೀ ತೊಂದರೆ ಅನುಭವಿಸುತ್ತಾರೆ. ಈ ನಿಟ್ಟಿನಲ್ಲಿ ಇದೇ 25ರ ನಂತರ ಬೆಂಗಳೂರಿನಿಂದ ಹೊರಹೋಗುವವರ ಸಂಖ್ಯೆ ಹೆಚ್ಚಿರೋ ಹಿನ್ನಲೆ, ಅಕ್ರಮ ಬಸ್ ನಿಲುಗಡೆ ತಪ್ಪಿಸಲು ಟ್ರಾಫಿಕ್ ಪೊಲೀಸರು ಖಾಸಗಿ ಬಸ್ಗಳಿಗೆ ಸಮಯ ನಿಗದಿ ಮಾಡಿದ್ದಾರೆ.
ಹಬ್ಬ ಹಾಗೂ ವಾರಾಂತ್ಯದಲ್ಲಿ 30 ಸೆಕೆಂಡ್ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಬೇಕು. ಸಾಮಾನ್ಯ ದಿನಗಳಲ್ಲಿ ಬಸ್ ನಿಲುಗಡೆಗೆ ಒಂದರಿಂದ ಎರಡು ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಈ ಸಮಯ ಪಾಲಿಸದಿದ್ರೇ ಒಂದರ ಹಿಂದೆ ಮತ್ತೊಂದು ಬಸ್ಗಳ ದಟ್ಟಣೆ ಉಂಟಾಗುತ್ತದೆ. ಹೀಗಾಗಿ ಸಮಯ ನಿಗದಿ ಮಾಡಲಾಗಿದೆ ಅಂತ ಬೆಂಗಳೂರು ನಗರ ಟ್ರಾಫಿಕ್ ಕಮಿಷನರ್ ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿದ್ದಾರೆ.
