ಉದಯವಾಹಿನಿ, ಸ್ಯಾಂಡಲ್ವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ʼಕಾಂತಾರʼ ಸಿನಿಮಾ ಮಾಡಿದ್ದ ದಾಖಲೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಇದೀಗ ʼಕಾಂತಾರ ಚಾಪ್ಟರ್ 1ʼಸಿನಿಮಾ ರಿಲೀಸ್ಗೆ ರೆಡಿಯಾಗಿದ್ದು ಇನ್ನೇನು ಕೆಲವೇ ದಿನದಲ್ಲಿ ತೆರೆ ಕಾಣಲಿದೆ. ಈಗಾಗಲೇ ಟ್ರೈಲರ್, ಹಾಡಿನ ಮೂಲಕ ಮೂಲಕ ಜನರ ನಿರೀಕ್ಷೆ ಇಮ್ಮಡಿಗೊಳಿಸುತ್ತಿರುವ ʼಕಾಂತಾರʼ ಸಿನಿಮಾ ತಂಡವು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ʼಕಾಂತಾರʼ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬಿಗ್ ಬಜೆಟ್ನಲ್ಲಿ ರಿಲೀಸ್ ಮಾಡಲಾಗುತ್ತಿದ್ದು, ದೊಡ್ಡ ತಾರಾಗಣ ಕೂಡ ಇದೆ. ಸಿನಿಮಾದ ಶೂಟಿಂಗ್, ಮೇಕಿಂಗ್ ಬಗ್ಗೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಈಗಾಗಲೇ ಅನೇಕ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಇತ್ತೀಚೆಗೆ ಮೃತಪಟ್ಟ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ನಟ ರಿಷಬ್ ಶೆಟ್ಟಿ ಅವರ ಬಗ್ಗೆ ಕೂಡ ಸಂದರ್ಶನದಲ್ಲಿ ಮಾತನಾಡಿದ್ದಾರೆ.ʼಕಾಂತಾರʼ ಸಿನಿಮಾ ನಿರ್ದೇಶಕ ಹಾಗೂ ಮುಖ್ಯ ಪಾತ್ರಧಾರಿ ರಿಷಬ್ ಶೆಟ್ಟಿ ‘ಕಾಂತಾರ ಚಾಪ್ಟರ್ 1’ ಸಿನಿಮಾ ಚಿತ್ರೀಕರಣ ಮಾಡುವಾಗ ಆದ ಅವಘಡದ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು ಹಾಗೂ ಶೂಟಿಂಗ್ ಅನುಭವಗಳ ಬಗ್ಗೆ ಅನೇಕ ವಿಚಾರ ಮೆಲುಕು ಹಾಕಿದ್ದಾರೆ.
ಶೂಟಿಂಗ್ ಸೆಟ್ನಲ್ಲಿ ಅನೇಕ ಅವಘಡಗಳಾಗುತ್ತಿದ್ದರೂ ಸಿನಿಮಾ ನಿಲ್ಲಿಸುವ ಯೋಚನೆ ಮಾಡ ಲಿಲ್ಲ. ಶೂಟಿಂಗ್ ಸೆಟ್ನಲ್ಲಿ ಎಲ್ಲ ವಿಚಾರದಲ್ಲಿ ಆದಷ್ಟು ಜಾಗೃತಿ ಮಾಡಿದ್ದೇವೆ. ಶೂಟಿಂಗ್ ಸಂಬಂಧಿಸಿದ ಯಾವುದೇ ಮಾಹಿತಿ ಇದ್ದರೂ ಕೂಡಲೆ ಸಿನಿಮಾ ತಂಡದೊಂದಿಗೆ ಹಾಗೂ ನಿರ್ಮಾಪಕರಿಗೆ ಮಾಹಿತಿಯನ್ನು ನೀಡುತ್ತಿದ್ದೆ. ಅಲ್ಲಿಗೆ ವಿಜಯಣ್ಣ ಬರುತ್ತಿದ್ದರು, ಎಲ್ಲವು ಕೂಡ ಪ್ಲ್ಯಾನ್ ಪ್ರಕಾರ ಮಾಡುತ್ತಿದ್ದೆವು ಎಂದು ಹೇಳಿದ್ದಾರೆ.
ʼಕಾಂತಾರ ಚಾಪ್ಟರ್ 1’ರಲ್ಲಿ ಕೆಲಸ ಮಾಡಿದ್ದ ಕೆಲವರು ಬೇರೆ ಬೇರೆ ಕಾರಣಗಳಿಗೆ ಸಾವನ್ನಪ್ಪಿದ್ದಾರೆ. ʼಕಾಂತಾರʼ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಕ್ಕೆ ಹೀಗೆಲ್ಲ ಆಗಿದ್ದು ಎಂಬ ಮಾತು ಸಹ ಕೇಳಿಬಂದಿತ್ತು. ಈ ಸಿನಿಮಾದ ಮೇಕಿಂಗ್ ಸಮಯದಲ್ಲಿ ಏನು ಘಟನೆಗಳು ಆಗಿವೆ ಅವೆಲ್ಲವೂ ಶೂಟಿಂಗ್ ಸೆಟ್ ನಲ್ಲಿ ಆಗಿರಲಿಲ್ಲ. ಬೇರೆ ಬೇರೆ ಕಡೆ ಅವಘಡ ಆಗಿತ್ತು.ಈ ವೇಳೆ ನಟ ರಾಕೇಶ್ ಪೂಜಾರಿ ನಿಧನವನ್ನು ಕೂಡ ಸ್ಮರಿಸಿ ಭಾವುಕರಾಗಿದ್ದಾರೆ. ಸಿನಿಮಾ ಸೆಟ್ನಲ್ಲಿ ಈ ಅವಘಡ ನಡೆಯದೇ ಹೋದರೂ, ʼಕಾಂತಾರʼ ಸಿನಿಮಾ ಸೆಟ್ನಲ್ಲಿ ಏನೋ ಸರಿಯಿಲ್ಲ ಅನ್ನೋ ಮಾತುಗಳು ಕೇಳಿ ಬಂದಿದ್ದವು ಎಂದು ಹೇಳಿದ್ದಾರೆ.
