ಉದಯವಾಹಿನಿ ,ಚಿತ್ರದುರ್ಗ: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಗೈರಾದ ಹಿನ್ನೆಲೆ ಚಿತ್ರದುರ್ಗದಲ್ಲಿ 68 ಸಿಬ್ಬಂದಿಗೆ ನೋಟಿಸ್ ನೀಡಿದ್ದು, ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
68 ಗಣತಿದಾರರು ಈವರೆಗೆ ಸಮೀಕ್ಷೆಗೆ ವರದಿ ಮಾಡಿಕೊಂಡಿಲ್ಲ. ಈ ಹಿನ್ನೆಲೆ ಗೈರಾಗಿ ನಿರ್ಲಕ್ಷ್ಯ ವಹಿಸಿದ 68 ಮಂದಿ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದ್ದಾರೆ. ಗೈರಾದವರಿಗೆ ನೋಟಿಸ್ ಒಂದೆಡೆಯಾದರೆ ಇನ್ನೊಂದೆಡೆ ಶಿಕ್ಷಕಿಯೊಬ್ಬರು ಕೇವಲ 5 ದಿನದಲ್ಲೇ ಸಮೀಕ್ಷೆ ಕಾರ್ಯ ಮುಗಿಸಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದಾಸರ್ಲಹಳ್ಳಿ ಗ್ರಾಮದಲ್ಲಿ ಶಿಕ್ಷಕಿ ಎಂ.ರಾಧಾ ತ್ವರಿತಗತಿಯಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿದ್ದಾರೆ. ಗ್ರಾಮದ ಜನರು ಕೆಲಸಕ್ಕೆ ಹೋಗುವ ಮುನ್ನ ಶಿಕ್ಷಕಿ ಹಾಜರಾಗುತ್ತಿದ್ದು, ಗ್ರಾಮದಲ್ಲೇ ಉಳಿದುಕೊಂಡು ಸಮೀಕ್ಷೆ ಕಾರ್ಯ ಕೈಗೊಂಡಿದ್ದಾರೆ. ಶಿಕ್ಷಕಿ ಎಂ.ರಾಧಾ ಕಾರ್ಯಕ್ಕೆ ದಾಸರ್ಲಹಳ್ಳಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
