ಉದಯವಾಹಿನಿ, ನವದೆಹಲಿ: ಬೆಂಗಳೂರಿನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಹತ್ಯೆಗೆ ಯತ್ನ ನಡೆಸಿದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ. ಸದ್ಯ ವಿದೇಶದಲ್ಲಿರುವ ಗ್ಯಾಂಗ್ಸ್ಟಾರ್ಗಳಾದ ರೋಹಿತ್ ಗೋದಾರ ಮತ್ತು ಗೋಲ್ಡಿ ಬ್ರಾರ್ ಸೂಚನೆಯ ಮೇರೆಗೆ ಮುನಾವರ್ ಫಾರೂಕಿಯನ್ನು ಹತ್ಯೆ ಮಾಡಲು ಹಂತಕರು ಸಂಚು ರೂಪಿಸಿದ್ದ ವಿಚಾರ ದೆಹಲಿ ಪೊಲೀಸರ ತನಿಖೆಯಿಂದ ಹೊರ ಬಿದ್ದಿದೆ.
ಡಿಸೆಂಬರ್ 2024 ರಲ್ಲಿ ಹರಿಯಾಣದಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ಆರೋಪಿಗಳಾದ ಶೂಟರ್ ರಾಹುಲ್ ಮತ್ತು ಸಾಹಿಲ್ ದೆಹಲಿಯಲ್ಲಿರುವ ಬಗ್ಗೆ ಖಚಿತ ಮಾಹಿತಿ ದೆಹಲಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿ ಆಧಾರದ ಮೇಲೆ ಇಬ್ಬರನ್ನು ಹಿಡಿಯಲು ಪೊಲೀಸರು ತೆರಳಿದ್ದರು.
ಗುರುವಾರ ಬೆಳಗ್ಗೆ 3 ಗಂಟೆಗೆ ದೆಹಲಿಯ ಐತ್ಪುರ್-ಕಾಳಿಂದಿ ಕುಂಜ್ ರಸ್ತೆಯಲ್ಲಿ ಬೈಕಿನಲ್ಲಿ ತೆರಳುತ್ತಿದ್ದಇಬ್ಬರನ್ನು ನಿಲ್ಲಿಸುವಂತೆ ಕೇಳಿದಾಗ ಇವರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತಿಯಾಗಿ ಪೊಲೀಸರು ಇವರ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಹಿಂದೂ (Hindu) ಧರ್ಮ ಮತ್ತು ದೇವರನ್ನು ಅವಹೇಳನ ಮಾಡುತ್ತಿರುವ ಮುನಾವರ್ ಫಾರೂಕಿ ಹತ್ಯೆ ನಡೆಸುವಂತೆ ರೋಹಿತ್ ಗೋದಾರ ಮತ್ತು ಗೋಲ್ಡಿ ಬ್ರಾರ್ ಕಡೆಯಿಂದ ನಮಗೆ ಸೂಚನೆ ಬಂದಿತ್ತು. ದೆಹಲಿಯಲ್ಲಿ ಮುನಾವರ್ ಫಾರೂಕಿ ಇರುವ ವಿಚಾರ ತಿಳಿದು ಹತ್ಯೆ ಮಾಡಲು ನಾವು ಬಂದಿದ್ದೇವೆ ಎಂದು ತಿಳಿಸಿದ್ದಾರೆ
