ಉದಯವಾಹಿನಿ, ಕೊತ್ತಲವಾಡಿ ಸಿನಿಮಾ ನಿರ್ಮಾಣ ಮಾಡುವ ಮೂಲಕ ಗಾಂಧಿನಗರಕ್ಕೆ ಪಾದಾರ್ಪಣೆ ಮಾಡಿದ್ದ ಯಶ್ (Yash) ತಾಯಿ ನಿರ್ಮಾಪಕಿ ಪುಷ್ಪ ಅರುಣ್ಕುಮಾರ್ ಮತ್ತೊಂದು ಸಿನಿಮಾವನ್ನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ತಮ್ಮ ಮೊದಲ ಸಿನಿಮಾ ಕೊತ್ತಲವಾಡಿ ಕಳೆದ ಆಗಸ್ಟ್ನಲ್ಲಿ ತೆರೆಕಂಡಿತ್ತು. ಬಳಿಕ ಅನುಷ್ಕಾ ಶೆಟ್ಟಿ ನಟನೆಯ ಘಾಟಿ ತೆಲುಗು ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿದ್ದರು.
ನಿರ್ಮಾಪಕಿ ಪುಷ್ಪಾ ಅರುಣ್ಕುಮಾರ್ ತಮ್ಮ ಕೊತ್ತಲವಾಡಿ ಸಿನಿಮಾ ರಿಲೀಸ್ ವೇಳೆ ಹಲವಾರು ಸಮಸ್ಯೆಗಳನ್ನ ಎದುರಿಸಿದ್ದರು. ಅಂದು ಎದುರಿಸಿದ ಸಮಸ್ಯೆಗಳೇ ಅವರು ಸಿನಿಮಾ ವಿತರಣೆ ಮಾಡಲು ಮುಂದಾಗುವಂತೆ ಮಾಡಿತ್ತು. ಇದೀಗ ಆ ಸಿನಿಮಾ ಹೇಳಿಕೊಳ್ಳುವ ಮಟ್ಟಿಗೆ ಯಶಸ್ಸು ಕಾಣದಿದ್ದರೂ ಛಲಬಿಡದೇ ಮತ್ತೊಂದು ಸಿನಿಮಾವನ್ನ ಅನೌನ್ಸ್ ಮಾಡಿದ್ದಾರೆ. ಅಂದಹಾಗೆ ಕೊತ್ತಲವಾಡಿ ಸಿನಿಮಾದ ನಿರ್ದೇಶಕರಾದ ಶ್ರೀರಾಜ್ ಜೊತೆ ಚಿತ್ರವನ್ನ ಮಾಡುವುದಾಗಿ ಮಾಹಿತಿ ಹೊರಬಿದ್ದಿದೆ.
ವಿಜಯ ದಶಮಿಯ ಹಬ್ಬದ ಶುಭ ದಿನದಂದು ಶುಭ ಸುದ್ದಿಯನ್ನ ಕೊಟ್ಟಿದ್ದಾರೆ ಯಶ್ ತಾಯಿ. ಮೊದಲ ಸಿನಿಮಾಗಿಂತಲೂ ವಿಭಿನ್ನವಾದ ಕಥೆಯನ್ನ ಈ ಬಾರಿ ನಿರ್ಮಾಣ ಮಾಡಲಿದ್ದಾರಂತೆ ಪುಷ್ಪಮ್ಮ. ಈ ಸಿನಿಮಾದ ಟೈಟಲ್ ಏನು? ಸಿನಿಮಾದ ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಬಗ್ಗೆ ಮಾಹಿತಿಯನ್ನ ಸದ್ಯದಲ್ಲೇ ಹಂಚಿಕೊಳ್ಳಲಿದ್ದಾರಂತೆ.
