ಉದಯವಾಹಿನಿ, ಚಿಕ್ಕಮಗಳೂರು: ದಸರಾ ರಜೆ ಇರುವುದರಿಂದ ಚಿಕ್ಕಮಗಳೂರಿನ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಹೀಗೆ ಬಂದ ಪ್ರವಾಸಿಗರು ಅಪಾಯಕಾರಿ ಸ್ಥಳಗಳಲ್ಲಿ ಹುಚ್ಚಾಟ ಮಾಡುತ್ತಿದ್ದಾರೆ. ಕಡೂರು ತಾಲೂಕಿನ ಅಯ್ಯನಕೆರೆಯ ವೀಕ್ಷಣಾ ಗೋಪುರದ ಮೇಲಿಂದ ಯುವಕ, ಯುವತಿಯರು, ಮಕ್ಕಳು ನೀರಿಗೆ ಜಿಗಿಯುತ್ತಿದ್ದಾರೆ. ವೇಗವಾಗಿ ಜಾರುವ ನೀರಿನಲ್ಲಿ ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನೂ ಶುಕ್ರವಾರ (ಅ.3) ಇದೇ ಜಾಗದಲ್ಲಿ ಈಜಲು ಹೋಗಿ ಬಾಲಕ ಮೃತಪಟ್ಟಿದ್ದ. ಇಷ್ಟಾದರೂ ಪ್ರವಾಸಿಗರು ಮಾತ್ರ ಪುಂಡಾಟ ನಿಲ್ಲಿಸಿಲ್ಲ.
ಏಳು ಗುಡ್ಡದ ಮಧ್ಯೆ ಇರುವ ಅಯ್ಯನಕೆರೆ ಸುಂದರ ಪ್ರವಾಸಿ ತಾಣವೂ ಹೌದು. ಸಾಲು ಸಾಲು ರಜೆ ಇರುವುದರಿಂದ ಇಲ್ಲಿಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಹೀಗೆ ಬಂದವರು ಪ್ರಕೃತಿ ಸೌಂದರ್ಯ ಸವಿಯದೇ ಪುಂಡಾಟ ಮಾಡಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಯ್ಯನಕೆರೆ ಇದ್ದು, ಪೊಲೀಸರು ಪ್ರವಾಸಿಗರ ಪುಂಡಾಟದ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
