ಉದಯವಾಹಿನಿ, ಶಿವಮೊಗ್ಗ: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಹರ್ಷ ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಅಮ್ಜದ್ ಹತ್ಯೆ ಕೇಸ್ಗೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ನಗರಕ್ಕೆ ಭೇಟಿ ನೀಡಿದ್ದಾರೆ. ಎನ್ಐಎ ಎಸ್ಪಿ ನೇತೃತ್ವದ ಮೂರು ಅಧಿಕಾರಿಗಳ ತಂಡ ಶಿವಮೊಗ್ಗದಲ್ಲಿ ತನಿಖೆ ಆರಂಭಿಸಿದೆ. ಅಮ್ಜದ್ ಕೊಲೆಯಲ್ಲಿ ಹರ್ಷ ಕೊಲೆಯ ನಂಟಿನ ಸಾಧ್ಯತೆ ಹಿನ್ನೆಲೆ ತನಿಖೆ ನಡೆಯುತ್ತಿದೆ. ನಗರದ ಪೊಲೀಸರ ಸಹಾಯದೊಂದಿಗೆ ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಮ್ಜದ್ ಕೊಲೆಯಲ್ಲಿ ಭಾಗಿಯಾದವರ ವಿಚಾರಣೆಗೂ ತಯಾರಿ ನಡೆಯುತ್ತಿದೆ. ಇತ್ತೀಚೆಗೆ ನಗರದಲ್ಲಿ ಹಲ್ಲೆಗೊಳಗಾಗಿ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಮ್ಜದ್, ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದರು. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
