ಉದಯವಾಹಿನಿ, ಪಾಟ್ನಾ: ಬಿಹಾರ ವಿಧಾನಸಭೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಒಂದು ಕಡೆ ಸೀಟು ಹಂಚಿಕೆ ಲೆಕ್ಕಚಾರಗಳು ನಡೆಯುತ್ತಿದ್ದರೆ ಮತ್ತೊಂದು ಕಡೆ ಭರಪೂರ ಕೊಡುಗೆಗಳ ಘೋಷಣೆ ಆರಂಭವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ, ಬಿಹಾರದ ಪ್ರತಿ ಮನೆಯಿಂದ ಒಬ್ಬ ವ್ಯಕ್ತಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಭರವಸೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಿದ 20 ದಿನಗಳಲ್ಲಿ ಉದ್ಯೋಗ ಖಾತರಿಪಡಿಸುವ ಹೊಸ ಕಾನೂನನ್ನು ಪರಿಚಯಿಸಲಾಗುವುದು ಎಂದು ಹೇಳಿದರು. ಅಧಿಕಾರ ವಹಿಸಿಕೊಂಡ 20 ತಿಂಗಳೊಳಗೆ ಈ ಯೋಜನೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ಜಾರಿಗೆ ತರಲಾಗುವುದು. 20 ತಿಂಗಳಲ್ಲಿ ಒಂದೇ ಒಂದು ಮನೆಯೂ ಸರ್ಕಾರಿ ಉದ್ಯೋಗವಿಲ್ಲದೆ ಇರುವುದಿಲ್ಲ ಎಂದು ಹೇಳಿದರು.
ಭರವಸೆಗೆ ದತ್ತಾಂಶ ಬೆಂಬಲವಿದೆ, ಇದು ನನ್ನ ಪ್ರತಿಜ್ಞೆ. ಇದನ್ನು ಮಾಡಲು ಸಾಧ್ಯವಿದೆ. ಇದು ಜುಮ್ಲೆಬಾಜಿ ಅಲ್ಲ. ಬಿಹಾರದ ಜನರು ಈ ಬಾರಿ ಬದಲಾವಣೆಯನ್ನು ಬಯಸುತ್ತಿದ್ದಾರೆ. ಸಾಮಾಜಿಕ ನ್ಯಾಯದ ಜೊತೆಗೆ, ನಾವು ಬಿಹಾರದ ಜನರಿಗೆ ಆರ್ಥಿಕ ನ್ಯಾಯವನ್ನು ಸಹ ಖಚಿತಪಡಿಸುತ್ತೇವೆ. ಇದನ್ನು ಸಾಧಿಸಬಹುದು, ಇದಕ್ಕೆ ದೃಢಸಂಕಲ್ಪ ಮಾತ್ರ ಬೇಕಾಗುತ್ತದೆ. ಎನ್‌ಡಿಎ ನಮ್ಮ ಘೋಷಣೆಗಳನ್ನು ನಕಲಿಸಿದ್ದಾರೆ ಎಂದು ತಿಳಿಸಿದರು.
ಈ ನಡುವೆ ಎನ್‌ಡಿಎ ಒಕ್ಕೂಟದಲ್ಲಿ ಸೀಟು ಹಂಚಿಕೆಗೆ ತಿಕ್ಕಾಟ ನಡೆಯುತ್ತಿದೆ. ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ 40ರಿಂದ 50 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದ್ದು, ಬಿಜೆಪಿ ಅವರಿಗೆ ಸುಮಾರು 20 ಸ್ಥಾನಗಳನ್ನು ನೀಡಲು ನಿರ್ಧರಿಸಿದೆ. ಆದರೆ ಇದಕ್ಕೆ ಚಿರಾಗ್ ಪಾಸ್ವಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾತನಾಡಿರುವ ಚಿರಾಗ್ ಪಾಸ್ವಾನ್, ಮಾತುಕತೆ ನಡೆಯುತ್ತಿವೆ. ಕೇಂದ್ರ ಸಚಿವರಾಗಿ ಉಳಿಯುವವರೆಗೆ ಸಚಿವಾಲಯದ ಜವಾಬ್ದಾರಿಗಳು ನನಗಿರುತ್ತವೆ, ಅದನ್ನು ಮಾಡುತ್ತಿದ್ದೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!