ಉದಯವಾಹಿನಿ, ಚೆನ್ನೈ: ಮನ್ನಾರ್ ಮತ್ತು ಡೆಲ್ಫ್ಟ್ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡಿನ 47 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಅಲ್ಲದೇ 5 ಮೀನುಗಾರಿಕಾ ಬೋಟ್ಗಳನ್ನು ವಶಕ್ಕೆ ಪಡೆದಿದೆ.
ಶ್ರೀಲಂಕಾ ಗಡಿ ಪ್ರವೇಶಿಸಿ ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮೀನುಗಾರರನ್ನು ಬಂಧಿಸಲಾಗಿದೆ. ಉತ್ತರ ಶ್ರೀಲಂಕಾದ ತಲೈಮನ್ನಾರ್ನಲ್ಲಿ ಬಂಧಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ. ಮೀನುಗಾರರ ಬಿಡುಗಡೆಗೆ ಕ್ರಮಕೈಗೊಳ್ಳುವಂತೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ಕೇಂದ್ರ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
ಒಂದು ತಿಂಗಳ ಹಿಂದೆ ಉತ್ತರ ಶ್ರೀಲಂಕಾದ ಜಾಫ್ನಾ ಬಳಿ 12 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಪಡೆ ಬಂಧಿಸಿತ್ತು. ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧದಲ್ಲಿ ಮೀನುಗಾರರಿಗೆ ಸಂಬಂಧಿಸಿದ ವಿಷಯ ವಿವಾದವಾಗಿಯೇ ಉಳಿದಿದೆ. ಶ್ರೀಲಂಕಾ ನೌಕಾಪಡೆಯು ಕೆಲವು ಸಂದರ್ಭಗಳಲ್ಲಿ ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿದೆ. ರಾಜತಾಂತ್ರಿಕ ಚರ್ಚೆಗಳ ನಡೆಯುತ್ತಿವೆ. ಇಷ್ಟಾದರೂ ಮೀನುಗಾರಿಕೆ ವಿವಾದವು ಉಭಯ ದೇಶಗಳ ನಡುವೆ ದೀರ್ಘಕಾಲದಿಂದ ಬಾಕಿ ಉಳಿದಿದೆ.
