ಉದಯವಾಹಿನಿ,ಭೋಪಾಲ್:  ಮಧ್ಯಪ್ರದೇಶದ ಸಿಧಿಯಲ್ಲಿ ಬುಡಕಟ್ಟು ಸಮುದಾಯದ ಕಾರ್ಮಿಕನ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆ ಹಸಿಯಾಗಿರುವಾಗಲೇ ಮತ್ತೊಂದು ಅಮಾನವೀಯ ಘಟನೆ ವರದಿಯಾಗಿದೆ. ರಾಜ್ಯದ ಗ್ವಾಲಿಯರ್‌ನಲ್ಲಿ ಚಲಿಸುವ ವಾಹನದಲ್ಲಿ ವ್ಯಕ್ತಿಯೊಬ್ಬನ ಕಾಲನ್ನು ಇನ್ನೊಬ್ಬನಿಂದ ಬಲವಂತವಾಗಿ ನೆಕ್ಕಿಸುವ ಆಘಾತಕಾರಿ ಕೃತ್ಯ ನಡೆದಿದೆ. ಇದರ ವಿಡಿಯೋ ವೈರಲ್ ಆಗಿದೆ. ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ. ಸಂತ್ರಸ್ತ ಹಾಗೂ ಆರೋಪಿಗಳು ಗ್ವಾಲಿಯರ್ ಜಿಲ್ಲೆಯ ದಬ್ರಾ ಪಟ್ಟಣದ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ವ್ಯಕ್ತಿಯ ಮುಖಕ್ಕೆ ಸತತವಾಗಿ ಥಳಿಸಲಾಗಿದೆ. ಆರೋಪಿ ಆತನನ್ನು ಅವಾಚ್ಯ ಪದಗಳಿಂದ ನಿಂದಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮತ್ತೊಬ್ಬ ವ್ಯಕ್ತಿ ಕೂಡ ಸಂತ್ರಸ್ತನ ಮುಖಕ್ಕೆ ಮತ್ತೆ ಮತ್ತೆ ಬಾರಿಸುವುದು ಕಾಣಿಸಿದೆ. ‘ಗೋಲು ಗುರ್ಜಾರ್ ತಂದೆ’ ಎಂದು ಆತನಿಂದ ಬಲವಂತವಾಗಿ ಹೇಳಿಸಿದ್ದಾರೆ. ಇಡೀ ಘಟನೆ ಚಲಿಸುವ ಕಾರಿನಲ್ಲಿ ನಡೆದಿದೆ. ಮತ್ತೊಂದು ವಿಡಿಯೋದಲ್ಲಿ, ಸಂತ್ರಸ್ತನಿಗೆ ಆರೋಪಿಯ ಚಪ್ಪಲಿಯಿಂದ ನಿರಂತರವಾಗಿ ಹೊಡೆದಿರುವುದು ಕಂಡುಬಂದಿದೆ. ವಿಡಿಯೋ ಸತ್ಯಾಸತ್ಯತೆ ತಿಳಿಯಲು ಫಾರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ದಬ್ರಾದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ವಿವೇಕ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!