ಉದಯವಾಹಿನಿ , ನವದೆಹಲಿ: ಇಬ್ಬರು ನುರಿತ ಮಹಿಳಾ ಕಳ್ಳರು ಹಗಲು ಹೊತ್ತಿನಲ್ಲೇ ಆಭರಣ ಅಂಗಡಿಯಲ್ಲಿ ಕಳ್ಳತನ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ದೆಹಲಿಯ ಲಕ್ಷ್ಮಿ ನಗರದ ಆಭರಣದ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಈ ವೈರಲ್ ದೃಶ್ಯಗಳು ನೆಟ್ಟಿಗರಲ್ಲಿ ಆಘಾತಕಾರಿ ಅಲೆಗಳನ್ನು ಉಂಟುಮಾಡಿದೆ. ಅಂಗಡಿಯಲ್ಲಿದ್ದ ಸಿಬ್ಬಂದಿಗೆ ಸಿಕ್ಕಿಬೀಳದೆ ಮಹಿಳೆಯರು, ಕಣ್ಣು ಮಿಟುಕಿಸುವುದರೊಳಗೆ ಚಿನ್ನದ ಉಂಗುರವನ್ನು ಕದ್ದು ನಕಲಿ ಉಂಗುರವನ್ನು ಅಲ್ಲಿಟ್ಟಿದ್ದಾರೆ. ಅಂಗಡಿಯೊಳಗಿನ ಸಿಸಿಟಿವಿಯಲ್ಲಿ ಇಡೀ ದೃಶ್ಯ ಸೆರೆಯಾಗಿದ್ದು, ಇದೀಗ ಈ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹಗಲು ಕಳ್ಳತನ ಮಾಡುವುದು ಎಂದರೆ ಖದೀಮರಿಗೆ ಯಾವುದೇ ಭಯವಿಲ್ಲ ಎಂದರ್ಥ. ಬೇರೊಬ್ಬರ ಕಣ್ಣಿಗೆ ಹೇಗೆ ಮಣ್ಣೆರಚಿ ಕಳ್ಳತನ ಮಾಡಲಾಗಿದೆ ಅನ್ನೋದನ್ನು ಈ ವಿಡಿಯೊದಲ್ಲಿ ನೋಡಬಹುದು. ಚಿನ್ನದ ಅಂಗಡಿಯಲ್ಲಿ ಗ್ರಾಹಕರು ಹೆಚ್ಚಿದ್ದರು. ಈ ವೇಳೆ ಇಬ್ಬರು ಮಹಿಳಾ ಖದೀಮರು ಬಂದು ಕುಳಿತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಸಿಬ್ಬಂದಿ ಅವರಿಗೆ ಚಿನ್ನದ ಉಂಗುರಗಳನ್ನು ತೋರಿಸುತ್ತಿರುವುದನ್ನು ವಿಡಿಯೊದಲ್ಲಿ ಗಮನಿಸಬಹುದು.
ಮಹಿಳಾ ಸಿಬ್ಬಂದಿಯು, ಮಹಿಳಾ ಗ್ರಾಹಕರಿಗೆ ಉಂಗುರಗಳಿಂದ ತುಂಬಿದ ಪೆಟ್ಟಿಗೆಯನ್ನು ಪ್ರದರ್ಶಿಸಿದ್ದಾರೆ. ಅವರಲ್ಲಿ ಒಬ್ಬರು ಉಂಗುರವನ್ನು ಆರಿಸಿದ್ದಾರೆ. ಅದನ್ನು ತಮ್ಮ ಕೈಯಲ್ಲಿರುವ ನಕಲಿ ಉಂಗುರದೊಂದಿಗೆ ಬದಲಾಯಿಸಿದ್ದಾರೆ. ನಂತರ ಮೆಲ್ಲನೆ ಆ ಚಿನ್ನದ ಉಂಗುರವನ್ನು ತಮ್ಮ ಪಕ್ಕದಲ್ಲಿ ಕುಳಿತಿದ್ದ ಮತ್ತೊಬ್ಬ ಮಹಿಳೆಯ ಕೈಗೆ ಕಳ್ಳಿ ನೀಡಿದ್ದಾಳೆ. ಇನ್ನೊಬ್ಬ ಮಹಿಳೆ ತಾನು ಹೊತ್ತೊಯ್ಯುವ ಕೈಚೀಲದಲ್ಲಿ ಉಂಗುರವನ್ನು ರಹಸ್ಯವಾಗಿ ಮರೆಮಾಡಿದ್ದಾಳೆ. ಆದರೆ, ಉಂಗುರಗಳನ್ನು ಬದಲಾಯಿಸಿಕೊಂಡ ಮಹಿಳೆ ಸಾಮಾನ್ಯ ಗ್ರಾಹಕರಂತೆ ತನ್ನ ಜೊತೆಗಾತಿಯೊಂದಿಗೆ ಮಾತನಾಡುತ್ತಾ ಪೆಟ್ಟಿಗೆಯನ್ನು ಮತ್ತೆ ಕೌಂಟರ್ನಲ್ಲಿ ಇಟ್ಟಿದ್ದಾಳೆ. ಕಳ್ಳಿಯರು ಎಷ್ಟು ಕೌಶಲ್ಯದಿಂದ ಈ ಪರಿಸ್ಥಿತಿಯನ್ನು ನಿರ್ವಹಿಸಿದ್ದಾರೆ ಎಂಬ ಬಗ್ಗೆ ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಆದರೆ, ಇಂತಹ ವಿಡಿಯೊಗಳು ತೀವ್ರ ಕಳವಳವನ್ನು ಹುಟ್ಟುಹಾಕಿದೆ.
