ಉದಯವಾಹಿನಿ,ನ್ಯೂಯಾರ್ಕ್: ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪು ಅವರ ಕವನದ ಸಾಲಿನಂತೆ ತಾಯಿನಾಡಿನಿಂದ ಹೊರಗೆ ಇದ್ದು, ತಮ್ಮ ಕಸ್ತೂರಿ ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿ, ಕಲೆಗಳು, ಆಟ ಪಾಠ, ಆಚರಣೆ, ವಿಚಾರಣೆ ಹಾಗೂಮುಂದಿನ ಪೀಳಿಗೆಗೆ ಕಲಿಸುವ ಉದ್ದೇಶದಿಂದ ಸೈಂಟ್ ಲೂಯಿಸ್ ಕನ್ನಡಾಭಿಮಾನಿ ಮಿತ್ರರ ಸಮಾಲೋಚನೆಯಿಂದ ಸಂಗಮದ ಉಗಮ.
ಇದು ಮಿಸ್ಸರಿ ಮತ್ತು ಮಿಸ್ಸಿಸ್ಸಿಪ್ಪಿ ನದಿಗಳ ಸಂಗಮ ಸ್ಥಾನ, ಸಂಗಮ ಕನ್ನಡ ಜನರ ಮಿಲನ ಸ್ಥಾನ. ಹಾಗಾಗಿ ಸಂಗಮದ ನಾಮಕರಣ ಈ ಕಾರಣಗಳಿಂದ. 1985ರ ಯುಗಾದಿಯ ಸಡಗರದೊಂದಿಗೆ ಸಂಗಮದ ಮೊತ್ತ ಮೊದಲ ಕಾರ್ಯಕ್ರಮ ನಡೆಯಿತು. ಅಂದಿನಿಂದ ಇಂದಿನವರೆಗೂ ಪ್ರತಿವರ್ಷ ಸಂಗಮ ಯುಗಾದಿ, ತಂದೆಯರ ದಿನಾಚರಣೆ ಹಾಗೂ ವನಭೋಜನ, ಗಣೇಶಹಬ್ಬ ಹಾಗೂ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಡಾ. ಶಂಕರ್ ಶಾಸ್ತ್ರೀ ಅವರು 40 ವರ್ಷಗಳಿಂದ ಗಣೇಶ ಹಬ್ಬವನ್ನು ಶಾಸೋಕ್ತವಾಗಿ, ಮಕ್ಕಳಿಗೆ ಮನ ಮುಟ್ಟುವಂತೆ ನಡೆಸಿಕೊಡು ತ್ತಿರುವುದು ಹಾಗೆಯೇ ಗಣೇಶ ಭಜನೆಗಳನ್ನು ಯುವ ಕಲಾವಿದರು ಪುಟಾಣಿ ಮಕ್ಕಳಿಗೆ ಕಲಿಸಿ ಹಾಡಿಸುತ್ತಿರುವ ಕ್ರಮ, ಅಂಬೊಡೆ ಕಡುಬುಗಳನ್ನು ಸದಸ್ಯರು ಒಂದೇ ಮನೆಯವರಂತೆ ಸೇರಿ ಮಾಡುತ್ತಿರುವುದು ವಿಶೇಷ ಸಂಗತಿ.
