ಉದಯವಾಹಿನಿ, ವಿಭಿನ್ನ ಫಿಕ್ಷನ್ ಮತ್ತು ನಾನ್ ಫಿಕ್ಷನ್ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನ ರಂಜಿಸುತ್ತಾ ಬಂದಿರುವ ಜೀ ಕನ್ನಡ ಇದೀಗ ವೀಕ್ಷಕರಿಗೆ ಮತ್ತೊಂದು ಸರ್ಪ್ರೈಸ್ ನೀಡಿದೆ. ಜನಮನ್ನಣೆ ಗಳಿಸಿರುವ ಎಲ್ಲರ ಅಚ್ಚುಮೆಚ್ಚಿನ ಡಾನ್ಸ್ ರಿಯಾಲಿಟಿ ಶೋ ‘ಡಾನ್ಸ್ ಕರ್ನಾಟಕ ಡಾನ್ಸ್’ ಹೊಸ ಸೀಸನ್ನೊಂದಿಗೆ ಮರಳಿ ಬರುತ್ತಿದೆ. ಡಾನ್ಸ್ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಈ ಶೋ ಈ ಬಾರಿ ಇನ್ನಷ್ಟು ವಿಭಿನ್ನವಾಗಿರಲಿದೆ. ಹೊಸ ಥೀಮ್ಗಳು, ಅದ್ಭುತ ಪ್ರತಿಭೆಗಳ ಪ್ರದರ್ಶನಗಳೊಂದಿಗೆ ಈ ಬಾರಿಯ ಶೋ ಮತ್ತಷ್ಟು ಮನರಂಜನೆ ನೀಡಲು ಸಜ್ಜಾಗಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನವೆಂಬರ್ 15ರಂದು ಪ್ರೀಮಿಯರ್ ಆಗಲಿದ್ದು, ಪ್ರತೀ ಶನಿವಾರ ಮತ್ತು ಭಾನುವಾರ ಸಂಜೆ 7:30ಕ್ಕೆ ಪ್ರಸಾರವಾಗಲಿದೆ.
ತನ್ನ ಮಾತಿನ ಮೂಲಕ ಜನಮನ್ನಣೆ ಪಡೆದ ಅನುಶ್ರೀ ಅವರು ಈ ಸೀಸನ್ನ ಆಂಕರ್ ಆಗಿರಲಿದ್ದು, ಜಡ್ಜಸ್ ಪ್ಯಾನೆಲ್ನಲ್ಲಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್, ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಮತ್ತು ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಇರಲಿದ್ದಾರೆ. ಕರುನಾಡ ಚಕ್ರವರ್ತಿ ಎಂದು ಚಿರಪರಿಚಿತರಾಗಿರುವ ಡಾ.ಶಿವರಾಜ್ ಕುಮಾರ್ ಅವರು ಅತ್ಯುತ್ತಮ ನಟ ಮಾತ್ರವಲ್ಲದೆ ಒಳ್ಳೆಯ ಡ್ಯಾನ್ಸರ್ ಆಗಿದ್ದು ತನ್ನ ಡಿಫರೆಂಟ್ ಸ್ಟೈಲ್ ಗೆ ಜನಪ್ರಿಯ. ಇನ್ನು ಇವರ ವರುಷಗಳ ಅನುಭವ, ಜ್ಞಾನ ಸ್ಪರ್ಧಿಗಳಿಗೆ ಹುಮ್ಮಸ್ಸು ನೀಡಲಿದೆ. ನಟಿ ಮಾತ್ರವಲ್ಲದೆ, ಶಾಸ್ತ್ರೀಯ ನೃತ್ಯಗಾರ್ತಿಯೂ ಆಗಿರುವ ರಚಿತಾರಾಮ್ ಅವರ ನಾಲೆಡ್ಜ್, ಬಹುಮುಖ ಪ್ರತಿಭೆ, ರಾಷ್ಟ್ರಪ್ರಶಸ್ತಿ ವಿಜೇತ ವಿಜಯ ರಾಘವೇಂದ್ರ ಅವರ ನಟನೆ, ಸಂಗೀತ ಮತ್ತು ಡಾನ್ಸ್ ಬಗೆಗಿನ ಜ್ಞಾನ, ಮತ್ತು ಅರ್ಜುನ್ ಜನ್ಯ ಅವರಿಗಿರುವ ಸಂಗೀತ, ತಾಳ, ಲಯಗಳ ಅರಿವು ಈ ಶೋಗೆ ಹೆಚ್ಚಿನ ಶಕ್ತಿ ತುಂಬಲಿದೆ.
