ಉದಯವಾಹಿನಿ, ಬಿಗ್‌ ಬಾಸ್‌ ಮನೆಯ ಜೋಡಿಹಕ್ಕಿಯಂತಿದ್ದ ಗಿಲ್ಲಿ ಮತ್ತು ಕಾವ್ಯ ಈಗ ದೂರ ದೂರ. ಪರಸ್ಪರ ಕೀಟಲೆ ಮಾಡುತ್ತ, ರೇಗಿಸುತ್ತ, ಹೊಡೆದು ಮಾತನಾಡುವಷ್ಟು ಹತ್ತಿರ ಇದ್ದವರು ಈಗ ಮನೆಯಲ್ಲಿ ಬೇರಾಗಿದ್ದಾರೆ. ಅಕ್ಕಪಕ್ಕ ಕುಳಿತುಕೊಳ್ಳುತ್ತಿಲ್ಲ.. ಮುಖ ನೋಡಿ ಮಾತನಾಡದಷ್ಟು ದೂರ ಉಳಿದಿದ್ದಾರೆ.
ತಮ್ಮಿಬ್ಬರ ಬಾಂಡೇಜ್ ಬಿಗ್‌ ಬಾಸ್‌ ಮನೆ ಮಂದಿ ಏನೇನು ಮಾತನಾಡುತ್ತಿದ್ದಾರೆಂದು ಗಿಲ್ಲಿ ಮತ್ತು ಕಾವ್ಯ ಒಟ್ಟಿಗೆ ಕೂತು ಚರ್ಚಿಸಿದ್ದರು. ‘ಇನ್ಮುಂದೆ ನಾವು ಸ್ಪರ್ಧಿಗಳಂತೆ ಇರೋಣ.. ಕಾವು ಅಂತೆಲ್ಲ ಕರೆಯಬೇಡ’ ಎಂದು ಗಿಲ್ಲಿಗೆ ಕಾವ್ಯ ಸಲಹೆ ನೀಡಿದ್ದರು. ಆದರೆ, ಗಿಲ್ಲಿ ಅದಕ್ಕೆ ಒಪ್ಪಲಿಲ್ಲ. ಕಾವು ಅಂತಲೇ ಕರೆಯೋದು ಎಂದು ಹಠ ಹಿಡಿದರು. ಆದರೆ, ಕಾವ್ಯ ಇದಕ್ಕೆ ಒಪ್ಪಲಿಲ್ಲ. ಕೊನೆಗೆ ಗಿಲ್ಲಿ, ‘ನಿನ್ನ ಮಾತನಾಡಿಸಲ್ಲ ಬಿಡು’ ಅಂತ ಹೇಳಿದರು. ‘ಹಾಗೆಲ್ಲ ಹೇಳಬೇಡ.. ಸ್ಪರ್ಧಿಗಳಾದ ಮೇಲೆ ಮಾತನಾಡಿಸಬೇಕು’ ಅಂತ ಕಾವ್ಯ ತಿಳಿಸಿದರು. ಗಿಲ್ಲಿ ಹಠ ಮಾಡಿದ್ದರಿಂದ ಇಬ್ಬರೂ ಮಾತನಾಡುವುದನ್ನೇ ನಿಲ್ಲಿಸಿದ್ದಾರೆ.

ನಿನ್ನೆ ಬಿಗ್‌ ಬಾಸ್‌ ಎರಡೂ ತಂಡಗಳಿಗೆ ಟಾಸ್ಕ್‌ ನೀಡುವ ಸಮಯ ಬಂದಿತ್ತು. ಆಗ ಗಿಲ್ಲಿ ಮತ್ತು ಕಾವ್ಯ ನಡುವೆ ಅಂತರ ಇತ್ತು. ಕಾಕ್ರೋಚ್‌ ಸುಧಿ ಬಂದು ಇಬ್ಬರ ಮಧ್ಯೆ ಕುಳಿತರು. ‘ನೀನ್ಯಾಕೆ ಮಧ್ಯ ಬಂದೆ’ ಅಂತ ಕಾಕ್ರೋಚ್‌ ಸುಧಿಗೆ ಗಿಲ್ಲಿ ಕೇಳಿದರು. ಸುಧಿ ಎದ್ದು ಹೋಗಲು ಮುಂದಾದರು. ಆಗ ಅವರ ಕೈ ಹಿಡಿದು ಕಾವ್ಯ ಕೂರಿಸಿಕೊಂಡರು. ‘ಮೂರನೆಯವರು ಅವರ (ಗಿಲ್ಲಿ) ಪಕ್ಕ ಕುಳಿತುಕೊಳ್ಳುವ ಅವಶ್ಯಕತೆ ಇಲ್ಲ. ಮೂರನೆಯವರಾಗಿಯೇ ಇರ್ತೀವಿ’ ಅಂತ ಗಿಲ್ಲಿಗೆ ಕಾವ್ಯ ಮುಖ ನೋಡದೇ ತಿರುಗೇಟು ಕೊಟ್ಟರು.
ತಟ್ಟೆ ಮೇಲೆ ಡೈಸ್‌ ಜೋಡಿಸುವ ಟಾಸ್ಕ್‌ ಕೊಡಲಾಗಿತ್ತು. ಅದರಲ್ಲಿ ನಾಮಿನೇಟ್‌ ತಂಡ ಗೆಲುವು ಸಾಧಿಸಿತು. ತಮ್ಮ ತಂಡ ಸೋತ ಬಗ್ಗೆ ಗಿಲ್ಲಿ ಬೇಸರದಿಂದ ಮಾತನಾಡಿದರು. ‘ನಾನು ಹೋದ ಟೀಂ ಸೋಲುತ್ತೆ ಅಂತ ಎಲ್ಲರೂ ಹೇಳುತ್ತಿದ್ದರು. ಈಗ ನನಗೂ ಹಾಗೆಯೇ ಅನ್ನಿಸುತ್ತಿದೆ’ ಅಂತ ಗಿಲ್ಲಿ ಬೇಸರದಿಂದ ನುಡಿದರು. ಈ ಮಾತು ಉಳಿದವರಿಗೆ ನಗು ತರಿಸಿತು. ‘ನೀನು ಹಗ್ಗನ ಸೊಂಟಕ್ಕೆ ಕಟ್ಟಿಕೊಳ್ಳಬೇಕಿತ್ತು’ ಅಂತ ಗಿಲ್ಲಿಗೆ ಸ್ಪಂದನೆ ಹೇಳಿದಾಗ, ಕಾವ್ಯ ಕೂಡ ಹೌದು ಎಂದರು. ಆಗ ಗಿಲ್ಲಿ ‘ಮೂರನೆಯವರು ಮಾತನಾಡುವ ಹಾಗಿಲ್ಲ.. ಯಾಕಂದ್ರೆ ಮೂರು ಸಲ ಡೈಸ್‌ ಬೀಳಿಸಿದ್ದೇ ಅವರು’ ಅಂತ ಕಾವ್ಯಗೆ ಟಾಂಗ್‌ ಕೊಟ್ಟರು. ಅದಕ್ಕೆ ಕಾರಣನೇ ನೀನು ಅಂತ ಕಾವ್ಯ ಕೂಡ ತಿರುಗೇಟು ಕೊಟ್ಟರು. ಆಗಲೂ ಕೂಡ ಒಬ್ಬರ ಮುಖ ಒಬ್ಬರು ನೋಡಿ ಮಾತನಾಡಲಿಲ್ಲ.

Leave a Reply

Your email address will not be published. Required fields are marked *

error: Content is protected !!