ಉದಯವಾಹಿನಿ, ರಾಯಚೂರು: ಅನಧಿಕೃತ ಚೆಕ್ ಪೋಸ್ಟ್ ತೆರೆದು ಲಾರಿ ಚಾಲಕರಿಂದ ಹಣ ವಸೂಲಿ ಮಾಡುತ್ತಿರುವ ಆರೋಪದ ಮೇಲೆ ರಾಯಚೂರಿನ ದೇವದುರ್ಗ ಎಪಿಎಂಸಿ ಅಧ್ಯಕ್ಷನ ವಿರುದ್ಧ ದೂರು ದಾಖಲಾಗಿದೆ. ಉಪಾಧ್ಯಕ್ಷ ಅಬ್ದುಲ್ ಅಜೀಜ್ ಅಧ್ಯಕ್ಷ ಆದನಗೌಡ ಬುಂಕಲದೊಡ್ಡಿ, ಎಪಿಎಂಸಿ ಪ್ರಭಾರ ಕಾರ್ಯದರ್ಶಿ ನೀಲಪ್ಪ ಶೆಟ್ಟಿ, ಚೆಕ್ ಪೋಸ್ಟ್ ಕೆಲಸಗಾರರು ಚಂದ್ರು, ರಮೇಶ್ ಸೇರಿ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದೇವದುರ್ಗದ ತಿಂಥಿಣಿ ಬ್ರಿಡ್ಜ್ ಬಳಿ ಅನಧಿಕೃತ ಚೆಕ್ ಪೋಸ್ಟ್ ನಿರ್ಮಿಸಿ, ಭತ್ತದ ಲಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಅನಧಿಕೃತ ಕೃಷಿ ಉತ್ಪನ್ನ ಸಾಗಾಣೆ ನಿಯಂತ್ರಣಕ್ಕೆ ಎಪಿಎಂಸಿಯಿಂದ ಯಾವುದೇ ಚೆಕ್ ಪೋಸ್ಟ್ ತೆರೆಯದಿದ್ದರೂ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಒಂದು ಲಾರಿಯಿಂದ 100 ರೂ.ಯಂತೆ ನಿತ್ಯ 5000-6000 ರೂ. ವಸೂಲಿ ಮಾಡಲಾಗುತ್ತಿದೆ. ಇದರಲ್ಲಿ 1000 ರೂ. ಕೆಲಸಗಾರರಿಗೆ ನೀಡಿ, ಉಳಿದ ಹಣ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
