ಉದಯವಾಹಿನಿ, ಬೆಂಗಳೂರು: ಕೊಡಿಗೆಹಳ್ಳಿಯ ಕೆಂಪೇಗೌಡ ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನ ರಸ್ತೆಯಲ್ಲಿ ಓಡಾಡಲು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಎರಡು ವಾರದ ಹಿಂದೆ ವಿರೇಶ್ (33) ಎಂಬ ಯುವಕನ ಮೇಲೆ 20 ಬೀದಿನಾಯಿಗಳು ದಾಳಿ ನಡೆಸಿದ್ದವು. ಆತನ ಕೈ, ಕಾಲು, ತಲೆ, ಕುತ್ತಿಗೆ ಭಾಗ ಹೀಗೆ ಕಂಡ ಕಂಡಲ್ಲಿ ಮಾಂಸವನ್ನ ಕಿತ್ತು ತಿಂದಿದ್ದವು. ನಂತರ ವಿರೇಶ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲಾಯ್ತು. ಸದ್ಯ ಗಾಯಾಳು ವಿರೇಶ್ ಮನೆಯಲ್ಲೇ ಚೇತರಿಸಿಕೊಳ್ಳತ್ತಿದ್ದಾನೆ. ಯುವಕನಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಜೊತೆಗೆ ದಾಳಿ ಮಾಡಿದ ಏರಿಯಾಗಳಲ್ಲೇ ಮತ್ತೆ ಬೀದಿ ನಾಯಿಗಳ ಕಾಟ ಜೋರಾಗಿದೆ. ನಾಯಿ ದಾಳಿಯಿಂದ ವಿರೇಶ್ ಕೆಲಸಕ್ಕೆ ಹೋಗಲು ಸಾಧ್ಯವಾಗ್ತಿಲ್ಲ. ಕೆಲಸವಿಲ್ಲದೇ ಜೀವನ ನಡೆಸೋದು ಕಷ್ಟವಾಗ್ತಿದೆ. ಜಿಬಿಎ ಅಧಿಕಾರಿಗಳಿಂದ ತಿಂಗಳಾದ್ರೂ ಇವರಿಗೆ ಪರಿಹಾರ ಬಂದಿಲ್ಲ. ಆಸ್ಪತ್ರೆ ಖರ್ಚು ಹಾಗೂ ಮಾತ್ರೆ ತೆಗೆದುಕೊಳ್ಳುವುದು ಕಷ್ಟವಾಗ್ತಿದೆ. ಹೀಗಾಗಿ ಪರಿಹಾರ ನೀಡಿ ಅಂತ ಅಂಗಲಾಚುತ್ತಿದ್ದಾನೆ.
ವಿರೇಶ್ ಕೊಡಿಗೆಹಳ್ಳಿ ಸಮೀಪದ ಗಣೇಶ ನಗರದಲ್ಲಿರೋ ದೊಡ್ಡ ಬೊಮ್ಮಸಂದ್ರ ಕೆರೆಗೆ ಹೋಗುವಾಗ ಬೀದಿ ನಾಯಿಗಳ ಗುಂಪು ದಾಳಿ ಮಾಡಿತ್ತು. ಇದ್ದಕ್ಕಿಂತ ಮೊದಲು ಪಕ್ಕದ ಟೆಲಿಕಾಂ ಲೇಔಟ್ನಲ್ಲಿ ಸೀತಪ್ಪ ಎಂಬ ವೃದ್ದ ಸಾವನ್ನಪ್ಪಿದ್ರು. ಎರಡು ಘಟನೆಗಳು ನಡೆದಾಗ ಜಿಬಿಎಯವರು ನಾಯಿಗಳನ್ನು ಹಿಡಿದುಕೊಂಡು ಹೋಗೋ ಕೆಲಸ ಮಾಡಿದ್ರು. ಆದ್ರೇ ಒಂದು ವಾರದ ನಂತರ ಮತ್ತೆ ನಾಯಿಗಳು ಪ್ರತ್ಯಕ್ಷವಾಗಿವೆ.
