ಉದಯವಾಹಿನಿ, ಮುಂಬೈ: ಭಾರತಕ್ಕೆ ಸುತ್ತಲೂ ಶತ್ರುಗಳ ಕಾಟ ಹೆಚ್ಚಾಗುತ್ತಲೇ ಇದೆ. ಒಂದು ಕಡೆ ಪಾಕಿಸ್ತಾನ , ಒಂದು ಕಡೆ ಚೀನಾ, ಮತ್ತೊಂದು ಕಡೆ ಬಾಂಗ್ಲಾದೇಶ. ಈ ದೇಶಗಳಿಗೆ ಪ್ರತ್ಯುತ್ತರ ನೀಡಲು ಭಾರತ ಕೂಡ ರಕ್ಷಣಾ ವಲಯದಲ್ಲಿ ದಿನೇ ದಿನೇ ಬಲಿಷ್ಠವಾಗುತ್ತಿದೆ. ದೇಶದ ಕರಾವಳಿಯ ಗಡಿಗಳನ್ನು ರಕ್ಷಿಸಲು ಮತ್ತು ಪ್ರಾಬಲ್ಯ ಸಾಧಿಸಲು ಹೊಸ ಹೊಸ ಅಸ್ತ್ರಗಳು ನೌಕಾಪಡೆಗೆ ಸೇರ್ಪಡೆಯಾಗುತ್ತಿವೆ. ಈ ನಿಟ್ಟಿನಲ್ಲಿ ಹೊಸದೊಂದು ಅಸ್ತ್ರ ಇಂದು ಭಾರತೀಯ ನೌಕಾಪಡೆ ಸೇರುತ್ತಿದೆ.
ಮುಂಬೈನ ನೌಕಾನೆಲೆಯಲ್ಲಿಂದು ʻಮಾಹೆʼ ಆವೃತ್ತಿಯ ಜಲಾಂತರ್ಗಾಮಿ ವಿರೋಧಿ ʻವಾರ್ಫೇರ್ ಶಾಲೋ ವಾಟರ್ ಕ್ರಾಫ್ಟ್ʼ ಸರಣಿಯ ಮೊದಲ ಯುದ್ಧ ನೌಕೆಯನ್ನು ನೌಕಾಪಡೆಗೆ ನಿಯೋಜಿಸಲಾಗುತ್ತಿದೆ. ಇದು ಶತ್ರುಗಳ ಎದೆಯಲ್ಲಿ ನಡುಕ ಸೃಷ್ಟಿಸಿದೆ. ಈ ಸಮಾರಂಭದಲ್ಲಿ ಪಶ್ಚಿಮ ನೌಕಾ ಕಮಾಂಡ್ನ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಪಾಲ್ಗೊಳ್ಳಲಿದ್ದಾರೆ.
ಸೈಲೆಂಟ್ ಹಂಟರ್ ʻಮಾಹೆʼ: ಹೊಸ ಪೀಳಿಗೆಯ ಜಲಾಂತರ್ಗಾಮಿ ವಿರೋಧಿ ನೌಕೆಯು ಕಾರ್ಯಾಚರಣೆಗೆ ಮುನ್ನವೇ ʻಮೂಕ ಬೇಟೆಗಾರʼ (ಸೈಲೆಂಟ್ ಹಂಟರ್) ಎಂದೇ ಖ್ಯಾತಿ ಪಡೆದಿದೆ. ಕೊಚ್ಚಿಯ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ನಿರ್ಮಿಸಿದ ʻಮಾಹೆʼ ನೌಕಾ ಹಡಗು ಆತ್ಮನಿರ್ಭರ ಭಾರತ ಉಪಕ್ರಮದ ಭಾಗವಾಗಿದೆ. ಅತ್ಯಂತ ಶಕ್ತಿಯುತ, ನಿಖರತೆ ಮತ್ತು ಸ್ಪಷ್ಟತೆಯನ್ನು ಹೊಂದಿದೆ, ಚಾಣಾಕ್ಷತೆಯಿಂದ ಕಾರ್ಯ ನಿರ್ವಹಿಸಲಿದ್ದು, ಕರಾವಳಿಯಲ್ಲಿ ಪ್ರಾಬಲ್ಯ ಸಾಧಿಸಲು ಬೇಕಿರುವ ಎಲ್ಲಾ ಸಾಮರ್ಥ್ಯ ಇದಕ್ಕಿದೆ.
