ಉದಯವಾಹಿನಿ, ಬೆಂಗಳೂರು: ಬ್ಲೈಂಡ್ ವಿಮೆನ್ಸ್ ಟಿ20 ಕ್ರಿಕೆಟ್ ವಿಶ್ವಕಪ್ ಗೆದ್ದಿರುವ ಭಾರತೀಯ ತಂಡದ ಸಾಧನೆ ಅತ್ಯಂತ ಚಾರಿತ್ರಿಕವಾದುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದರು. ಭಾರತದ ಬ್ಲೈಂಡ್ ವಿಮೆನ್ಸ್ ಕ್ರಿಕೆಟ್ ತಂಡವನ್ನು ನಗರದ ದಿ ಚಾನ್ಸರಿ ಪೆವಿಲಿಯನ್ ಹೋಟೆಲ್ನಲ್ಲಿ ಇಂದು ಅಭಿನಂದಿಸಿ ಅವರು ಮಾತನಾಡಿದ ಅವರು, ಸರಣಿಯುದ್ದಕ್ಕೂ ಭಾರತದ ತಂಡವು ಗೆಲುವು ಸಾಧಿಸುತ್ತಲೇ ಮುನ್ನಡೆದಿದ್ದು ಮೆಚ್ಚಬೇಕಾದ ವಿಚಾರ ಎಂದು ಹೇಳಿದರು. ಪರಿಶ್ರಮ, ತಂಡದ ಸಾಧನೆ, ಬದ್ಧತೆಯ ಮೂಲಕ ಇದನ್ನು ಸಾಧಿಸಲು ಸಾಧ್ಯ. ಸಮರ್ಥ ಟ್ರಸ್ಟ್ನ ಅಧ್ಯಕ್ಷರು ಮತ್ತು ಬ್ಲೈಂಡ್ ಕ್ರಿಕೆಟ್ ಅಸೋಸಿಯೇಶನ್ನ ಮೆಂಟರ್ ಡಾ.ಮಹಂತೇಶ್ ಜಿ.ಕಿವಡಸನ್ನವರ್ ಅವರು ತೆರೆಮರೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಅವರಿಗೂ ಅಭಿನಂದನೆಗಳು ಎಂದು ತಿಳಿಸಿದರು. ಬ್ಲೈಂಡ್ ಕ್ರಿಕೆಟ್ ಅಸೋಸಿಯೇಶನ್ನ ಮೆಂಟರ್ ಡಾ.ಮಹಂತೇಶ್ ಜಿ.ಕಿವಡಸನ್ನವರ್, ಕ್ಯಾಪ್ಟನ್ ದೀಪಿಕಾ ಟಿ.ಸಿ, ತಂಡದ ಕೋಚ್ ಸಂದು, ಟೀಮ್ ಮ್ಯಾನೇಜರ್ ಶಿಕಾ ಶೆಟ್ಟಿ, ಬಿಜೆಪಿ ಸಂಸದ ಪಿ.ಸಿ.ಮೋಹನ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಬೆಂಗಳೂರು ನಗರ ಅಧ್ಯಕ್ಷ ಸಪ್ತಗಿರಿ ಗೌಡ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಅವರು ಭಾಗವಹಿಸಿದ್ದರು.
