ಉದಯವಾಹಿನಿ, ಬಿಗ್ ಬಾಸ್ ಅರಮನೆಗೆ ಪಾರ್ಟಿಗೆ ಬಂದಿರೋ ಅತಿಥಿಗಳು, ಸ್ಪರ್ಧಿಗಳ ವಿರುದ್ಧ ಗರಂ ಆಗಿದ್ದಾರೆ. ತಮಾಷೆಗೆ ಕಾಲೆಳೆದ ಗಿಲ್ಲಿ ಮೇಲೆ ರಜತ್ ಕೆಂಡಕಾರಿದ್ದಾರೆ. ಮಾಜಿ ಸ್ಪರ್ಧಿಗಳಾದ ಚೈತ್ರಾ ಕುಂದಾಪುರ, ರಜತ್, ಮೋಕ್ಷಿತಾ, ಉಗ್ರಂ ಮಂಜು, ತ್ರಿವಿಕ್ರಮ್ ಅತಿಥಿಗಳಾಗಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರಿಗೆ ಸ್ಪರ್ಧಿಗಳು ಸ್ಪೆಷಲ್ ಪಾರ್ಟಿ ಕೊಡಬೇಕಿತ್ತು. ಮೋಜು-ಮಸ್ತಿಯಿಂದ ಕೂಡಿರಬೇಕಿದ್ದ ಮನೆಯಲ್ಲಿ ಅತಿಥಿಗಳು ಕೋಪಗೊಂಡಿದ್ದಾರೆ. ಅಷ್ಟಕ್ಕೂ ಏನಾಯ್ತು ಮನೆಯಲ್ಲಿ ಎಂಬುದರ ಸಣ್ಣ ಝಲಕ್ ಅನ್ನು ಪ್ರೋಮೊ ಮೂಲಕ ಬಿಗ್ ಬಾಸ್ ಹಂಚಿಕೊಂಡಿದೆ.
ದೊಡ್ಮನೆಯಲ್ಲಿ ಪಾರ್ಟಿ ವೇಳೆ ಬಿಗ್ ಬಾಸ್ ಒಂದು ಅನೌನ್ಸ್ಮೆಂಟ್ ಮಾಡ್ತಾರೆ. ‘ನಮ್ಮ ನಲ್ಮೆಯ ಮಹಾರಾಜ ಮಂಜು ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ’ ಅಂತ ಹೇಳ್ತಾರೆ. ಎಲ್ಲಾ ಸ್ಪರ್ಧಿಗಳು ಮಂಜಣ್ಣನಿಗೆ ವಿಶ್ ಮಾಡ್ತಾರೆ. ಆಗ ಗಿಲ್ಲಿ, ‘ಎರಡನೆಯದಾ ಅಥವಾ ಮೂರನೆಯದಾ’ ಅಂತ ಕಾಲೆಳೆಯುತ್ತಾರೆ. ಈ ಮಾತು ಮಂಜಣ್ಣನಲ್ಲಿ ಕೋಪ ತರಿಸುತ್ತೆ. ಕೋಪದಿಂದ ಗಿಲ್ಲಿ ಕಡೆ ಹೋಗಿ, ‘ಪರ್ಸನಲ್ ಅಂತ ಬಂದುಬಿಟ್ರೆ.. ನಾನು ಅತಿಥಿಯೂ ಅಲ್ಲ, ನೀನು ಸಪ್ಲೆಯರ್ ಅಲ್ಲ’ ಅಂತ ಮಂಜಣ್ಣ ಎಚ್ಚರಿಕೆ ಕೊಡ್ತಾರೆ. ಆಗ ಗಿಲ್ಲಿ ತಮ್ಮ ಮಾತಿಗೆ ಕ್ಷಮೆ ಯಾಚಿಸ್ತಾರೆ.
ನಾವು ಯಾಕಾಗಿ ಬಂದಿದ್ದೇವೆ ಅಂತ ಮೋಕ್ಷಿತ ತಿಳಿಸುತ್ತಾರೆ. ‘ಹಾಗಾದ್ರೆ ನೀವು ಬಿಟ್ಟಿ ಊಟಕ್ಕೆ ಬಂದಿದ್ದೀರಾ’ ಅಂತ ಗಿಲ್ಲಿ ಮತ್ತೆ ಕಾಲೆಳೆಯುತ್ತಾರೆ. ಈ ಮಾತಿಗೆ ರಜತ್ ಕೋಪಗೊಂಡು, ‘ನೀನ್ ಕೊಡ್ತಿದ್ದೀಯಪ್ಪ ಬಿಟ್ಟಿ ಊಟ.. ಮಾತ್ಗಳು ಕರೆಕ್ಟಾಗಿ ಬರ್ಲಿ.. ಎಲ್ಲರ ಹತ್ತಿರ ಮಾತಾಡ್ದಂಗೆ ನನ್ ಹತ್ರ ಮಾತಾಡ್ಬೇಡ.. ಎಷ್ಟರಲ್ಲಿ ಇರ್ಬೇಕು ಅಷ್ಟರಲ್ಲಿ ಇರು ಮಗಾ’ ಅಂತ ಗರಂ ಆಗ್ತಾರೆ. ಗಿಲ್ಲಿ ಮತ್ತೆ ಕ್ಷಮೆ ಕೇಳ್ತಾರೆ.
