ಉದಯವಾಹಿನಿ, ನವದೆಹಲಿ: ಆಧಾರ್ ಕಾರ್ಡ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ನುಸುಳುಕೋರರ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ವಿದೇಶಿಗರನ್ನ ಮತದಾರರ ಪಟ್ಟಿಯಲ್ಲಿ ಸೇರಿಸೋದಕ್ಕೆ ಆಧಾರ್ ಕಾರ್ಡ್ ಒಂದೇ ಸಾಕಾ ಎಂದು ಕೇಳಿದೆ. ಆಧಾರ್ ಮತ್ತು ಕಲ್ಯಾಣ ಸವಲತ್ತುಗಳನ್ನ ಪಡೆಯಲು ಯಶಸ್ವಿಯಾಗಿರುವ ವಿದೇಶಿಯರಿಗೆ ಮತದಾನಕ್ಕೆ ಅವಕಾಶ ನೀಡಬೇಕೇ ಎಂದು ಚಾಟಿ ಬೀಸಿದೆ.
ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠವು ಇಂದು ಹಲವಾರು ರಾಜ್ಯಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ನಡೆಸುವ ಚುನಾವಣಾ ಆಯೋಗದ ಕ್ರಮದ ಸಿಂಧುತ್ವ ಪ್ರಶ್ನಿಸುವ ಅರ್ಜಿಗಳ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ, ಮತದಾನದ ಹಕ್ಕುಗಳಿಗೆ ಆಧಾರ್ ಮಾತ್ರವೇ ಸ್ವಯಂಚಾಲಿತ ಮಾರ್ಗವಾಗಬಹುದೇ ಎಂದು ಕೇಳಿದೆ.
ಆಧಾರ್ʼ ಒಂದು ಕಾನೂನಿನ ರಚನೆಯಾಗಿದೆ. ಕಲ್ಯಾಣ ಸೌಲಭ್ಯಗಳನ್ನ ಪಡೆಯಲು ಆಧಾರ್ ಕಾರ್ಡ್ ಬಳಕೆಯನ್ನ ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ಹಾಗಂತ ಆಧಾರ್ ಪಡೆದಿರುವ ಕಾರಣಕ್ಕೆ ಮತದಾರರನ್ನಾಗಿ ಮಾಡಬೇಕು ಎಂದರ್ಥವೇ..? ಎಂದು ಪೀಠವು ಪ್ರಶ್ನೆ ಮಾಡಿದೆ. ಆಧಾರ್ ಅನ್ನೋದು ಸವಲತ್ತುಗಳನ್ನು ಪಡೆಯಲು ರೂಪಿಸಲಾದ ಒಂದು ಕಾನೂನು. ಅದಕ್ಕಾಗಿಯೇ ಅದು ಇತರ ದಾಖಲೆಗಳ ಪಟ್ಟಿಯಲ್ಲಿ ಒಂದಾಗಿರುತ್ತದೆ ಎಂದು ಹೇಳಿದ್ದೇವೆ. ಒಬ್ಬ ವ್ಯಕ್ತಿಗೆ ಪಡಿತರಕ್ಕಾಗಿ ಆಧಾರ್ ನೀಡಲಾಗಿದೆ ಅಂದ ಮಾತ್ರಕ್ಕೆ ಅವರನ್ನ ಮತದಾರನನ್ನಾಗಿ ಮಾಡಬೇಕೇ? ಯಾರಾದ್ರೂ ನೆರೆಯ ದೇಶಕ್ಕೆ ಸೇರಿದವರು ಅಥವಾ ಕಾರ್ಮಿಕರು ಕೆಲಸ ಮಾಡಿತ್ತಿದ್ದರೆ, ಅವರಿಗೆ ಸೌಲಭ್ಯ ಕೊಟ್ಟ ಮಾತ್ರಕ್ಕೆ ವೋಟಿಂಗ್ ಹಕ್ಕು ಕೊಡಬೇಕೇ? ಆಧಾರ್ ಕಾರ್ಡ್ ಪೌರತ್ವದ ಸಾಕ್ಷ್ಯ ನೀಡುವುದಿಲ್ಲ. ಕಾಳಜಿ ಇದ್ದರೆ, ಗಡಿ ರಾಜ್ಯಗಳಿಗೆ ಅನ್ವಯಿಸಬಹುದು.
