ಉದಯವಾಹಿನಿ, ಬೆಂಗಳೂರು: ಕಷ್ಟಕ್ಕೆ ಅಂತಾ ಸಾಲ ಮಾಡಿ, ತಿಂಗಳು ತಿಂಗಳು ಕಂತು ಕಟ್ಟುತ್ತಾ ಬಂದು, ಒಂದೇ ಸಲ ಉಳಿದ ಹಣ ನೀಡುತ್ತೇನೆ ಅಂದರೂ ಫೈನಾನ್ಸ್ ಕಂಪನಿ ಮಾತ್ರ ತಮ್ಮ ಮೊಂಡುತನ ಮೆರೆದಿದೆ. ಇದರಿಂದ ಬೇಸತ್ತ ಮಹಿಳೆಯೊಬ್ಬರು ಆರ್‌ಬಿಐ ಮೊರೆಹೋಗಿದ್ದಾರೆ.
ವ್ಯಾಪಾರಕ್ಕೆ ಅಂತಾ ಸಣ್ಣ ಪ್ರಮಾಣದ ಫೈನಾನ್ಸ್ ಕಂಪನಿಯಿಂದ ರಮಾದೇವಿ ಎಂಬ ಮಹಿಳೆ ಕಳೆದ ನಾಲ್ಕು ವರ್ಷಗಳ ಹಿಂದೆ 23 ಲಕ್ಷ ಹಣವನ್ನ ತಮ್ಮ ಆಸ್ತಿ ಪತ್ರವನ್ನ ಅಡಮಾನವಾಗಿಟ್ಟು ಸಾಲ ಪಡೆದಿದ್ದಾರೆ. ಸಾಲ ಪಡೆದ ಈಕೆ ಕಳೆದ ಮೂರು ವರ್ಷದವರೆಗೆ ಪ್ರತಿ ತಿಂಗಳು ಸುಮಾರು 31 ಸಾವಿರ ರೂ. ಕಂತನ್ನ ಕಟ್ಟಿಕೊಂಡು ಬಂದಿದ್ದಾರೆ. ಹೀಗೆ ಪ್ರತಿ ತಿಂಗಳು ಖಾಸಗಿ ಫೈನಾನ್ಸ್ನ ಕಂಪನಿಗೆ ಕಂತು ಕಟ್ಟೋದಕ್ಕಿಂತ ಒಮ್ಮೆಲೇ ಸಾಲವನ್ನ ತೀರಿಸೋದು ಉತ್ತಮ ಅಂತಾ ಕೋ ಆಪರೇಟಿವ್ ಬ್ಯಾಂಕ್ ಮೂಲಕ ಸಾಲವನ್ನ ಬ್ಯಾಂಕ್‌ಗೆ ವರ್ಗಾವಣೆ ಮಾಡಿಸಲು ಮುಂದಾಗಿದ್ದಾರೆ.
ಆದರೆ ಆ ಫೈನಾನ್ಸ್ ಕಂಪನಿಯವರು ಕಳೆದ ಒಂದು ವರ್ಷದಿಂದ ಈ ತಿಂಗಳು ವರ್ಗಾವಣೆ ಮಾಡುತ್ತೇವೆ, ಮುಂದಿನ ತಿಂಗಳು ಮಾಡುತ್ತೇವೆ ಎಂದು ಹೇಳುತ್ತಲೇ ಕಾಲ ದೂಡುತ್ತಾ ಬಂದಿದ್ದಾರೆ. ರಮಾದೇವಿ ಬೇರೆ ದಾರಿ ಕಾಣದೇ ಫೈನಾನ್ಸ್ ಕಂಪನಿಯವರ ವಿರುದ್ಧ ಆರ್‌ಬಿಐಗೆ ದೂರು ನೀಡಿದ್ದು, ನಮಗೆ ಫೈನಾನ್ಸ್ ಕಂಪನಿಯವರು ಕಿರುಕುಳ ನೀಡುತ್ತಿದ್ದಾರೆ. ನಾವು ಒಂದೇ ಸಲ ಸಾಲ ತೀರಿಸಲು ಮುಂದಾದರೂ ಕೂಡ ಅದಕ್ಕೆ ಸಹಕಾರ ಕೊಡುತ್ತಿಲ್ಲ ಎಂದು ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!