ಉದಯವಾಹಿನಿ, ಬೀದರ್: ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿಯಿಂದ 1.69 ಲಕ್ಷ ಹೆಕ್ಟರ್ ಬೆಳೆ ಹಾನಿಯಾಗಿದ್ದು, NDRF & SDRF ನಿಯಮ ಪ್ರಕಾರ 140 ಕೋಟಿ ರೂ. ಹಣ ರೈತರ ಖಾತೆಗೆ ಜಮೆ ಆಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. 1.80 ಲಕ್ಷ ರೈತರ ಖಾತೆಗೆ 140 ಕೋಟಿ ರೂ. ಪರಿಹಾರ ಹಣ ಜಮೆ ಆಗಿದ್ದು, ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್‌ಗೆ 8500 ರೂ. ಕೂಡ ಬಿಡುಗಡೆ ಆಗಿದೆ. ಜೊತೆಗೆ ವೈಮಾನಿಕ ಸಮೀಕ್ಷೆ ನಡೆಸಿ ಸಿಎಂ ಘೋಷಣೆ ಮಾಡಿದ್ದ 130 ಕೋಟಿ ರೂ. ಬಿಡುಗಡೆಯಾಗಿದೆ. ಒಟ್ಟು 280 ಕೋಟಿ ರೂ.ಗಳ ಪೈಕಿ ಈವರೆಗೆ 258 ಕೋಟಿ ರೂ. ರೈತರ ಖಾತೆಗೆ ಜಮೆಯಾಗಿದೆ ಎಂದು ಮಾಹಿತಿ ನೀಡಿದರು.

ಇನ್ನೂ 20 ಕೋಟಿ ರೂ. ತಾಂತ್ರಿಕ ಸಮಸ್ಯೆಯಿಂದ ಖಾತೆಗೆ ಜಮೆ ಆಗಿಲ್ಲ. ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಆ ಹಣವು ಕೂಡ ಬರುತ್ತೆ. ಕಡಿಮೆ ಸಮಯದಲ್ಲಿ ಕೊಟ್ಟ ಮಾತಿನಂತೆ ರೈತರ ಖಾತೆಗೆ ಬೆಳೆ ಪರಿಹಾರದ ಹಣ ಜಮೆ ಮಾಡಿದ್ದೇವೆ. ಬೆಳೆ ವಿಮೆಯ 40 ಕೋಟಿ ರೂ. ಹಣ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದು, ನಮ್ಮ ಸರ್ಕಾರ ರೈತರ ಪರ ಹಾಗೂ ರೈತರ ಬಗ್ಗೆ ಕಾಳಜಿಯುಳ್ಳ ಸರ್ಕಾರವಾಗಿದೆ ಎಂದು ಹೇಳಿದರು.

ಪ್ರತಿಪಕ್ಷದವರಿಗೆ ನಮಗೆ ಪ್ರಶ್ನೆ ಮಾಡುವ ಯಾವುದೇ ನೈತಿಕತೆ ಇಲ್ಲ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ, ಹೆಚ್ಚುವರಿ ಪರಿಹಾರ ತರುವಲ್ಲಿ ಪ್ರಯತ್ನ ಮಾಡಬೇಕು. ಬಿಜೆಪಿ ಶಾಸಕರು ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುವ ಬದಲು ಕೇಂದ್ರ ಸರ್ಕಾರದ ಕಚೇರಿ ಮುಂದೆ ಧರಣಿ ಕೂರಬೇಕು. ಕಬ್ಬಿನ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ, ನಾವಲ್ಲ ಮೊಸಳೆ ಕಣ್ಣೀರು ಹಾಕುತ್ತಾ ಅವರು ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

Leave a Reply

Your email address will not be published. Required fields are marked *

error: Content is protected !!