ಉದಯವಾಹಿನಿ, ಜೆರುಸಲೇಂ: ಇಸ್ರೇಲ್ ಹಾಗೂ ಆಕ್ರಮಿತ ಫೆಲೆಸ್ತೀನ್ ಪ್ರದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗಳ ಪರಿಶೀಲನೆಗಾಗಿ ವಿಶ್ವಸಂಸ್ಥೆ ರಚಿಸಿರುವ ಪ್ರಮುಖ ಅಂತರರಾಷ್ಟ್ರೀಯ ವಿಚಾರಣಾ ಆಯೋಗಕ್ಕೆ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ಜಾಗತಿಕ ರಾಜಕೀಯದ ಅತ್ಯಂತ ಸೂಕ್ಷ್ಮವಿಚಾರವಾಗಿರುವ ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ಹಿನ್ನಲೆಯಲ್ಲಿ ಈ ಕ್ರಮ ಜಾಗತಿಕ ಮಟ್ಟದಲ್ಲಿ ಗಮನಸೆಳೆದಿದೆ.
2021ರಲ್ಲಿ ರಚಿಸಲ್ಪಟ್ಟ ಮೂರು ಸದಸ್ಯರ ಆಯೋಗವು ಇದೀಗ ಇಸ್ರೇಲ್ ಗಾಝಾದಲ್ಲಿ ಕೈಗೊಂಡ ಸೇನಾ ಚಟುವಟಿಕೆಗಳು, ವಸಾಹತು ಚಟುವಟಿಕೆಗಳು ಮತ್ತು ಫೆಲೆಸ್ತೀನಿಯರ ಮೇಲಿನ ದೌರ್ಜನ್ಯಗಳ ಕುರಿತು ವಿಸ್ಕೃತ ಪರಿಶೀಲನೆ ನಡೆಸಲಿದೆ.
ಮುರಳೀಧರ್ ಅವರು ಬ್ರೆಝಿಲ್ ನ ಕಾನೂನು ತಜ್ಞ ಪಾಲೊ ಸೆರ್ಗಿಯೊ ಪಿನ್ದೀರೊ ಅವರ ನಂತರ ಆಯೋಗದ ನೇತೃತ್ವ ವಹಿಸಲಿದ್ದಾರೆ.
ಕಳೆದ ವರ್ಷ ವಿಶ್ವಸಂಸ್ಥೆ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡಿತ್ತು. ಅಕ್ಟೋಬರ್ 7, 2023ರ ಹಮಾಸ್ ದಾಳಿಯ ನಂತರ ಗಾಝಾದಲ್ಲಿ ಇಸ್ರೇಲ್ ಕೈಗೊಂಡ ಕ್ರಮಗಳು, ಶಸ್ತ್ರಾಸ್ತ್ರ ಪೂರೈಕೆ, ವಸಾಹತು ವಿಸ್ತರಣೆ ಸೇರಿದಂತೆ ಹಲವು ವಿಷಯಗಳ ಕುರಿತು ಆಯೋಗವು ಮಾನವ ಹಕ್ಕುಗಳ ಮಂಡಳಿ ಹಾಗೂ ಸಾಮಾನ್ಯ ಸಭೆಗೆ ವರದಿ ಸಲ್ಲಿಸಬೇಕಿದೆ. 2025ರ ಸೆಪ್ಟೆಂಬರ್ ನಲ್ಲಿ ಆಯೋಗವು ಸಲ್ಲಿಸಿದ್ದ ವರದಿ, ಗಾಝಾದಲ್ಲಿ ಇಸ್ರೇಲ್ ಫೆಲೆಸ್ತೀನಿಯರ ಮೇಲೆ ನರಮೇಧ ನಡೆಸಿದೆ ಎಂದು ಗಂಭೀರ ಆರೋಪ ಮಾಡಿತ್ತು. ಇಸ್ರೇಲ್ ಈ ವರದಿಯನ್ನು ತೀವ್ರವಾಗಿ ತಳ್ಳಿ ಹಾಕಿದ್ದು, ಅದು ರಾಜಕೀಯ ಉದ್ದೇಶಿತ ಎಂದು ಪ್ರತಿಕ್ರಿಯಿಸಿತ್ತು.
