ಉದಯವಾಹಿನಿ, ಹಾಸನ: ಚನ್ನರಾಯಪಟ್ಟಣ ತಾಲೂಕಿನ ಜೋಗಿಪುರದಲ್ಲಿ ಸಮುದಾಯ ಭವನ ಉದ್ಘಾಟನೆ ವಿಚಾರವಾಗಿ ಜೆಡಿಎಸ್ (JDS) ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಉದ್ಘಾಟನೆಗೆ ಬಂದಿದ್ದ ಶಾಸಕ‌ ಸಿ.ಎನ್.ಬಾಲಕೃಷ್ಣ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ತಡೆದಿದ್ದು, ಪರಿಸ್ಥಿತಿ ಮಿತಿಮೀರಿ ಶಾಸಕರನ್ನೇ ಎಳೆದಾಡಿದ್ದಾರೆ.
ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಮುದಾಯ ಭವನ ಉದ್ಘಾಟಿಸಲು ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಜೋಗಿಪುರಕ್ಕೆ ಆಗಮಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉದ್ಘಾಟನೆಗೆ ಅಡ್ಡಿಪಡಿಸಿದ್ದಾರೆ. ಕಾಂಗ್ರೆಸ್ ಮುಖಂಡರನ್ನು ಸಮಾಧಾನ ಮಾಡಲು ಶಾಸಕರು ಪ್ರಯತ್ನಿಸಿದರು. ಈ ವೇಳೆ ಸಮುದಾಯದ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಂಡಿದ್ದರೆ ಇಲಾಖೆಯ ಪತ್ರ ಕೊಡಿ ಎಂದು ಕಾಂಗ್ರೆಸ್ ಮುಖಂಡ ನಂದ ಒತ್ತಾಯಿಸಿದ್ದಾರೆ.
ವಿರೋಧದ ನಡುವೆಯೂ ಉದ್ಘಾಟನೆಗೆ ಮುಂದಾದಾಗ ಶಾಸಕರನ್ನು ಮುಂದೆ ಹೋಗದಂತೆ ಕಾಂಗ್ರೆಸ್ ಮುಖಂಡರು ತಡೆದು ಎಳೆದಾಡಿದರು. ಬಳಿಕ ಸಮುದಾಯ ಭವನ ಉದ್ಘಾಟಿಸಿ ಭಾಷಣ ಮಾಡುವಾಗ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದರು.‌ ವಾಪಸ್‌ ತೆರಳುವಾಗ ಧಿಕ್ಕಾರ ಕೂಗಿ ನಾಮಫಲಕದ ಕಲ್ಲನ್ನು ಒಡೆದು ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!