ಉದಯವಾಹಿನಿ, ನವದೆಹಲಿ: ಕಳೆದ ಎಂಟು ದಿನಗಳಿಂದ ಉಂಟಾಗುತ್ತಿರುವ ವಿಮಾನಗಳ ಹಾರಾಟ ರದ್ದು ಹಾಗೂ ಸಂಚಾರ ವ್ಯತ್ಯಯ ಸಮಸ್ಯೆಗೆ ಇಂಡಿಗೋದ ಆಂತರಿಕ ರೋಸ್ಟರಿಂಗ್ ಅಡಚಣೆಗಳೇ ಕಾರಣ. ಯಾವ ವಿಮಾನಯಾನ ಸಂಸ್ಥೆಯೂ ಕಾನೂನಿಗಿಂತ ದೊಡ್ಡದಲ್ಲ ಎಂದು ಕೇಂದ್ರ ವಿಮಾನಯಾನ ಸಚಿವ ರಾಮ್ಮೋಹನ್ ನಾಯ್ಡು ಸ್ಪಷ್ಟನೆ ನೀಡಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ಯಾವ ವಿಮಾನಯಾನ ಸಂಸ್ಥೆಯೂ ಕಾನೂನಿಗಿಂತ ದೊಡ್ಡದಲ್ಲ ಯೋಜನಾ ವೈಫಲ್ಯ ಹಾಗೂ ಶಾಸನಬದ್ಧ ನಿಬಂಧನೆಗಳನ್ನು ಪಾಲಿಸದೇ ಪ್ರಯಾಣಿಕರಿಗೆ ತೊಂದರೆ ಕೊಡುವಂತಿಲ್ಲ. ವಿಮಾನಗಳ ರದ್ಧತಿಯಿಂದಾಗಿ ಪ್ರಯಾಣಿಕರಿಗೆ ಉಂಟಾದ ಸಮಸ್ಯೆಗೆ ಇಂಡಿಗೋ ಸಂಸ್ಥೆಯೇ ಹೊಣೆ. ಈಗಾಗಲೇ ಈ ಸಂಬಂಧ ಇಂಡಿಗೋ ವಿಮಾನಯಾನ ಸಂಸ್ಥೆಯ ಸಿಇಓಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಇನ್ನೂ ಈ ಕುರಿತು ತನಿಖೆ ಆರಂಭಿಸಲಾಗಿದ್ದು, ತನಿಖಾ ವರದಿ ಆಧಾರದ ಮೇಲೆ ವಿಮಾನಯಾನ ನಿಯಮಗಳು ಹಾಗೂ ಕಾಯ್ದೆಯಡಿಯಲ್ಲಿ ಕಠಿಣ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
