
ಉದಯವಾಹಿನಿ, ನವದೆಹಲಿ: ಮತಕಳ್ಳತನಕ್ಕಿಂತ ದೊಡ್ಡ ರಾಷ್ಟ್ರ ವಿರೋಧಿ ಕೃತ್ಯ ಇನ್ನೊಂದಿಲ್ಲ. ಆರ್ಎಸ್ಎಸ್ ಚಿಂತನೆಗಳಿರುವ ಅಧಿಕಾರಿಗಳನ್ನು ಚುನಾವಣಾ ಆಯೋಗದಲ್ಲಿ ತುಂಬಲಾಗಿದೆ ಎಂದು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತಂತೆ ಲೋಕಸಭೆಯ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಚುನಾವಣಾ ಆಯೋಗ, ಸಿಬಿಐ, ಇಡಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಮೋದಿ ಸರ್ಕಾರ ಚುನಾವಣೆಗಳನ್ನು ಕಸಿದುಕೊಳ್ಳುತ್ತಿದೆ. ಸಾಂವಿಧಾನಿಕ ಸಂಸ್ಥೆಯ ಕಬ್ಜ ಮಾಡುವ ಉದ್ದೇಶ ಏನು ಎಂದು ಪ್ರಶ್ನೆ ಮಾಡಿದರು.
ಚುನಾವಣಾ ಮಾಹಿತಿ ಕೇಳಿದರೆ 45 ದಿನಗಳಲ್ಲೇ ಡಿಲಿಟ್ ಆಗಿದೆ ಎನ್ನುತ್ತಾರೆ. ನರೇಂದ್ರ ಮೋದಿ ಅವರಿಗೆ ಅನುಕೂಲ ಆಗುವಂತೆ 3-4 ತಿಂಗಳ ಕಾಲ ಪ್ರಚಾರಕ್ಕೆ ವೇಳಾಪಟ್ಟಿ ಮಾಡಲಾಗುತ್ತೆ. ಚುನಾವಣಾ ಸುಧಾರಣೆ ಸರಳ ಮತ್ತು ಸುಲಭ. ಆದರೆ ಸರ್ಕಾರಕ್ಕೆ ಇದನ್ನು ಮಾಡಲು ಮನಸಿಲ್ಲ. ಅದರ ಬದಲಿಗೆ ಕಬ್ಜ ಮಾಡುತ್ತಿದ್ದಾರೆ ಎಂದು ದೂರಿದರು.
ನಿಯಮಗಳನ್ನು ಬದಲಿಸುವ ಅಧಿಕಾರವನ್ನು ಮುಖ್ಯ ಆಯುಕ್ತರಿಗೆ ಕೊಡಿ. ನಾವು ಅಧಿಕಾರಕ್ಕೆ ಬಂದರೆ ನಾವು ಕಾನೂನು ಬದಲಾವಣೆ ಬದಲಾವಣೆ ಮಾಡುತ್ತೇವೆ. ಚುನಾವಣಾ ಆಯೋಗದ ಆಯುಕ್ತರ ನೇಮಕಾತಿ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಡೆ ಇಟ್ಟಿದ್ದು ಯಾಕೆ? ನಮ್ಮದು ದೊಡ್ಡ ಪ್ರಜಾಪ್ರಭುತ್ವ ಅಲ್ಲ, ಅತ್ಯಾದ್ಭುತ ಪ್ರಜಾಪ್ರಭುತ್ವ. ಮತ ಕಳವು ದೇಶದ್ರೋಹಿ ಚಟುವಟಿಕೆ ಎಂದು ವಾಗ್ದಾಳಿ ನಡೆಸಿದರು.
