ಉದಯವಾಹಿನಿ, ಹಾವೇರಿ: ಜಿಲ್ಲೆಯಲ್ಲಿ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಚಪ್ಪಲಿ ಹಾರ ಹಾಕಿ ಶಿಕ್ಷಕನ ಮೆರವಣಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 22 ಮಂದಿ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ.
ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಡಿ.10ರಂದು ಶಾಲೆಯ ಮುಖ್ಯ ಶಿಕ್ಷಕ ರಾಜೇಸಾಬ ಖುದಾನಸಾಬ ಸಂಕನೂರ ಅವರು ಸವಣೂರು ಠಾಣೆಗೆ ದೂರು ನೀಡಿದ್ದರು. ಅದರನ್ವಯ ಶಿಕ್ಷಕ ಜಗದೀಶ್ ವಗ್ಗಣ್ಣನವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಶಿಕ್ಷಕ ಜಗದೀಶ್ ಸಹ ದೂರು ನೀಡಿದ್ದಾರೆ. ಶಾಲೆಯಲ್ಲಿ ಶಿಕ್ಷಕನನ್ನು ಥಳಿಸಿದವರು, ಚಪ್ಪಲಿಯಿಂದ ಹೊಡೆದವರು, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದವರನ್ನು ವಿಡಿಯೋ ಆಧರಿಸಿ ಪತ್ತೆ ಮಾಡಲಾಗಿದ್ದು, ಅಪಮಾನ ಮಾಡಿ, ಜೀವಬೆದರಿಕೆಯೊಡ್ಡಿರುವ ಆರೋಪದಡಿ 22 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಜೊತೆಗೆ ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
