ಉದಯವಾಹಿನಿ,  ಮುಂಬೈ: ಸಮಾಜವಾದಿ ಪಕ್ಷದ ಶಾಸಕರೊಬ್ಬರು ‘ವಂದೇ ಮಾತರಂ’ ಘೋಷಣೆ ವಿಚಾರವಾಗಿ ತೆಗೆದ ಕ್ಯಾತೆ ವಿಚಾರ ಇದೀಗ ಮಹಾರಾಷ್ಟ್ರ ವಿಧಾನಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಗಿದ್ದು, ಸದನವನ್ನು ನಾಳೆಗೆ ಮುಂದೂಡಲಾಗಿದೆ. ಹೌದು..ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ಅವರ `ವಂದೇ ಮಾತರಂ’ ಘೋಷಣೆ ವಿಚಾರವಾಗಿ ಕ್ಯಾತೆ ತೆಗೆದಿದ್ದು ಇದರಿಂದ ರೊಚ್ಚಿಗೆದ್ದ ಬಿಜೆಪಿ ಶಾಸಕರು ವಾಗ್ದಾಳಿ ನಡೆಸಿದ್ದಾರೆ. ಬಳಿಕ ಪರಸ್ಪರ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಗದ್ದಲ ತೀವ್ರವಾದ ಹಿನ್ನಲೆಯಲ್ಲಿ ಮಹಾರಾಷ್ಟ್ರ ವಿಧಾನಸಭೆಯನ್ನು ಸ್ಪೀಕರ್ ಮುಂದೂಡಿದ್ದಾರೆ. ಸಂಭಾಜಿನಗರ ಜಿಲ್ಲೆಯಲ್ಲಿ ನಡೆದ ಗಲಭೆಯ ವಿಚಾರವನ್ನು ಪ್ರಸ್ತಾಪಿಸಿದ ಸಮಾಜವಾದಿ ಪಕ್ಷದ ಅಬು ಅಜ್ಮಿ, ‘ವಂದೇ ಮಾತರಂ’ ಘೋಷಣೆಯನ್ನು ಹೇಳುವುದು ನನಗೆ ಸ್ವೀಕಾರಾರ್ಹವಲ್ಲ.. ನಾವು ಇದನ್ನು ಒಪ್ಪುವುದೂ ಇಲ್ಲ. ಭಾರತದಲ್ಲಿ ವಾಸಿಸಬೇಕಾದರೆ ವಂದೇ ಮಾತರಂ ಪಠಿಸಬೇಕು ಎಂದು ಕೆಲವರು ಹೇಳುತ್ತಾರೆ, ನಾವು ಅದನ್ನು ಮಾಡಲು ಸಾಧ್ಯವಿಲ್ಲ, ನಾವು ಒಬ್ಬ ದೇವರನ್ನು ಮಾತ್ರ ನಂಬುತ್ತೇವೆ ಎಂದು ಅವರು ಹೇಳಿದರು.
ಇದಕ್ಕೆ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅಬು ಅಜ್ಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ವೇಳೆ ಸದನದಲ್ಲಿ ಗದ್ದಲ ಏರ್ಪಟ್ಟಿತ್ತು. ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಶಾಸಕರನ್ನು ಶಾಂತಗೊಳ್ಳುವಂತೆ ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!