ಉದಯವಾಹಿನಿ, ಬೆಂಗಳೂರು: ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಬೇಕು ಅನ್ನೋ ನನ್ನ ಹೇಳಿಕೆ ಕಾರ್ಯಕರ್ತರ ಅಪೇಕ್ಷೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ.
ತಮ್ಮ ಹೇಳಿಕೆಯಿಂದ ಮೈತ್ರಿಯಲ್ಲಿ ಗೊಂದಲ ಉಂಟಾಗಿರುವ ಬಗ್ಗೆ ಬೆಂಗಳೂರಿನಲ್ಲಿ ಮಾತಾಡಿದ ವಿಜಯೇಂದ್ರ, ಪ್ರತೀ ಚುನಾವಣೆಯಲ್ಲೂ ನಾವು ಸ್ಪಷ್ಟ ಬಹುಮತಕ್ಕೆ 5-10 ಸೀಟ್‌ಗಳಿಂದ ವಂಚಿತರಾಗಿದ್ದೀವಿ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಅನ್ನೋದು ಕಾರ್ಯಕರ್ತರ ಅಪೇಕ್ಷೆ. ಮೊನ್ನೆ ನಡೆದ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿದೆ.

ಕಾರ್ಯಕರ್ತರ ಆಕಾಂಕ್ಷೆಯಂತೆ ಅಧ್ಯಕ್ಷನಾಗಿ ನಾನು ಮಾತಾಡೋದು ನನ್ನ ಕರ್ತವ್ಯ. ಅಂತಿಮವಾಗಿ ಕಾರ್ಯಕರ್ತರಿಗೆ ಏನು ಸಂದೇಶ ಕೊಡಬೇಕೋ ಕೊಟ್ಟಿದ್ದೇನೆ ಅಂತ ಹೇಳಿದ್ರು. ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಇಲ್ಲ ಎಂಬ ದೇವೇಗೌಡರ ಹೇಳಿಕೆ ಕುರಿತು ಮಾತಾಡಿದ ವಿಜಯೇಂದ್ರ, ಮಾಜಿ ಪ್ರಧಾನಿ ದೇವೇಗೌಡರ  ಬಗ್ಗೆ ನಮಗೆ ಗೌರವ ಇದೆ. ಅವರು ಮುತ್ಸದ್ದಿಗಳು. ದೇವೇಗೌಡರು ಮತ್ತು ಯಡಿಯೂರಪ್ಪ ಮಾತ್ರ ಹೋರಾಟದ ಹಿನ್ನೆಲೆಯಲ್ಲಿ ಬಂದವರು. ಮೋದಿಯವರ ಕೈ ಬಲಪಡಿಸಲು ಅವರು ಎನ್‌ಡಿಎ ಮಿತ್ರ ಪಕ್ಷ ಆಗಿದ್ದಾರೆ. ದೇವೇಗೌಡರು ನಿನ್ನೆ ಮಾತಾಡಿರೋದಕ್ಕೆ ಸಂತೋಷ ಇದೆ. ವರಿಷ್ಠರು ಹೇಳೋದನ್ನು ನಾವು ಕೇಳ್ತೇವೆ, ಇದರಲ್ಲಿ ಯಾವುದೇ ಗೊಂದಲ ಇಲ್ಲ. ಮೈತ್ರಿ ಬಗ್ಗೆ ಹೈಕಮಾಂಡ್ ಮಾತು ಕೇಳ್ತೇವೆ. ದೇವೇಗೌಡರು ಹೇಳಿರೋದನ್ನು ತಪ್ಪಾಗಿ ಅರ್ಥೈಸುವ ಅಗತ್ಯ ಇಲ್ಲ. ಸ್ಥಳೀಯ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಳ್ಳಬೇಕು ಅಂತ ಹೈಕಮಾಂಡ್ ಹೇಳಿದ್ರೆ ಅದಕ್ಕೆ ನಾವೆಲ್ಲ ಬದ್ಧವಾಗಿರ್ತೇವೆ ಅಂದ್ರು.

Leave a Reply

Your email address will not be published. Required fields are marked *

error: Content is protected !!