ಉದಯವಾಹಿನಿ, ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಅಭಿಮಾನಿಗಳು ಹೂವಿನ‌ಹಾರ ಹಾಕಿ ಸಂಭ್ರಮಿಸಿ ಸ್ವಾಗತಿಸಿದ್ದಾರೆ. ಜನಪ್ರತಿನಿಧಿಗಳ ಕೋರ್ಟ್‌ನಿಂದ ಇಂದು ಜಾಮೀನು ಸಿಕ್ಕಿದ ಹಿನ್ನೆಲೆಯಲ್ಲಿ ಸಂಜೆಯಿಂದಲೇ ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿನ ದಾರಿಯಲ್ಲಿ ಕಾಯುತ್ತಿದ್ದರು. ಕಾರಿನಲ್ಲಿ ವೀರೇಂದ್ರ ಪಪ್ಪಿ ಬರುತ್ತಿದ್ದಂತೆ ಸುತ್ತುಗಟ್ಟಿದ ಅಭಿಮಾನಿಗಳು ಘೋಷಣೆಗಳನ್ನು ಕೂಗಿ ಜೈಕಾರ ಹಾಕಿದರು. ಕಾರಿನಿಂದ ಇಳಿದ ಶಾಸಕರು ಅಭಿಮಾನಿಗಳಿಗೆ ಶೇಕ್‌ ಹ್ಯಾಂಡ್‌ ಮಾಡಿ ಸಂತಸ ವ್ಯಕ್ತಪಡಿಸಿದರು.ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ವೀರೇಂದ್ರ ಪಪ್ಪಿಯನ್ನ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಚಿತ್ರದುರ್ಗ, ಬೆಂಗಳೂರು ಸೇರಿದಂತೆ ವೀರೇಂದ್ರ ಪಪ್ಪಿ ಮನೆ, ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಹಲವು ದಾಖಲೆಗಳನ್ನ ವಶಕ್ಕೆ ಪಡೆದು, ವೀರೇಂದ್ರ ಪಪ್ಪಿಯ ಖಾತೆಗಳನ್ನು ಫ್ರೀಜ್ ಮಾಡಲಾಗಿತ್ತು. ಕಳೆದ ನಾಲ್ಕು ತಿಂಗಳಿನಿಂದ ಜೈಲಿನಲ್ಲಿದ್ದ ಪಪ್ಪಿಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. 5 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿ, ಸಾಕ್ಷಿನಾಶ ಮಾಡಬಾರದು, ದೇಶಬಿಟ್ಟು ತೆರಳಬಾರದೆಂಬ ಷರತ್ತಿನೊಂದಿಗೆ ಜಾಮೀನು ನೀಡಿದೆ.

Leave a Reply

Your email address will not be published. Required fields are marked *

error: Content is protected !!