ಉದಯವಾಹಿನಿ, ಬೆಂಗಳೂರು : ಜನಾರ್ದನ ರೆಡ್ಡಿ ಮನೆಯ ಮುಂದೆ ನಡೆದ ಘರ್ಷಣೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಶಾಸಕ ಭರತ್ ರೆಡ್ಡಿ ಮೇಲೆ ಗರಂ ಆಗಿದ್ದು, ಗಲಾಟೆ ಬೇಕಿರಲಿಲ್ಲ, ಕಾರ್ಯಕರ್ತನ ಸಾವಾಗಿದೆ. ಜನಾರ್ದನ ರೆಡ್ಡಿ ಮನೆ ಮುಂದೆ ಹೋಗಿ ಬ್ಯಾನರ್ ಕಟ್ಟುವುದು ಸರಿಯಾದ ನಿರ್ಧಾರವಲ್ಲ ಎಂದಿದ್ದಾರೆ.
ಬಳ್ಳಾರಿ ಗಲಾಟೆಗೆ ಸಂಬಂಧಿಸಿದಂತೆ ಸಿಎಂ ನಿವಾಸದಲ್ಲಿ ಮಾತುಕತೆ ನಡೆಯಿತು. ಈ ವೇಳೆ ಜಮೀರ್ ಅಹಮದ್ ಭರತ್ ರೆಡ್ಡಿ ಜೊತೆ ಫೋನಿನಲ್ಲಿ ಮಾತನಾಡಿದರು. ಬಳಿಕ ಜಮೀರ್ ಸಿಎಂ ಕೈಗೆ ಫೋನ್ ಕೊಟ್ಟು ಭರತ್ ರೆಡ್ಡಿ ಜೊತೆ ಮಾತನಾಡುವಂತೆ ಮನವಿ ಮಾಡಿದರು. ಆದರೆ ಸಿಎಂ ಭರತ್ ರೆಡ್ಡಿ ಜೊತೆ ಫೋನಿನಲ್ಲಿ ಮಾತನಾಡಲು ನಿರಾಕರಿಸಿದರು ಎಂದು ಮೂಲಗಳು ಮಾಹಿತಿ ತಿಳಿಸಿವೆ. ನಾನು ಭರತ್ ರೆಡ್ಡಿ ಜೊತೆ ಮಾತಾಡಲ್ಲ ಎಂದು ಫೋನ್ ತೆಗೆದುಕೊಳ್ಳದ ಸಿಎಂ ಕಂಪ್ಲಿ ಗಣೇಶ್, ನಾಗೇಂದ್ರ ಜೊತೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸುವಂತೆ ಸೂಚಿಸಿದ್ದಾರೆ.
