ಉದಯವಾಹಿನಿ, ಧರ್ಮಶಾಲಾ: ಹಿಮಾಚಲ ಪ್ರದೇಶದ ಧರ್ಮಶಾಲಾದ ಸರ್ಕಾರಿ ಪದವಿ ಕಾಲೇಜಿನ 2ನೇ ವರ್ಷದ ವಿದ್ಯಾರ್ಥಿನಿಯೊಬ್ಬಳು ಅನಾರೋಗ್ಯದಿಂದ ಸಾವನ್ನಪ್ಪಿದ್ದಾಳೆ. ಆಕೆ ಸಾವಿನ ಬಳಿಕ ಮೊಬೈಲ್ನಲ್ಲಿ ಪ್ರಾಧ್ಯಾಪಕರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ವೀಡಿಯೋ ಪತ್ತೆಯಾಗಿದೆ. ವೀಡಿಯೋದಲ್ಲಿ ಪ್ರಾಧ್ಯಾಪಕರು ಹಲವಾರು ಬಾರಿ ಅನುಚಿತವಾಗಿ ಸ್ಪರ್ಶಿಸಿದ್ದರು, ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದಾಳೆ.
ವಿದ್ಯಾರ್ಥಿನಿಯ ತಂದೆ ವಿಕ್ರಮ್ ಸಿಂಗ್ ನೀಡಿರುವ ದೂರಿನಲ್ಲಿ, ಸೆಪ್ಟೆಂಬರ್ 18 ರಂದು ಹರ್ಷಿತಾ, ಅಕೃತಿ ಮತ್ತು ಕೊಮೊಲಿಕಾ ಎಂಬ ಮೂವರು ವಿದ್ಯಾರ್ಥಿನಿಯರು ತಮ್ಮ ಮಗಳ ಮೇಲೆ ರ್ಯಾಗಿಂಗ್ ಮಾಡಿ ಹಲ್ಲೆ ನಡೆಸಿದ್ದಾರೆ. ಬಳಿಕ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ. ಕಾಲೇಜಿನ ಪ್ರಾಧ್ಯಾಪಕ ಅಶೋಕ್ ಕುಮಾರ್ನ ಅಸಭ್ಯ ವರ್ತನೆ ಮತ್ತು ಮಾನಸಿಕ ಕಿರುಕುಳದಿಂದಾಗಿ ತನ್ನ ಮಗಳು ಹೆಚ್ಚಿನ ಒತ್ತಡದಿಂದ ಬಳಲುತ್ತಿದ್ದಳು. ಇದು ಆಕೆಯ ಆರೋಗ್ಯ ನಿರಂತರವಾಗಿ ಹದಗೆಡಲು ಕಾರಣವಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿನಿ ಸಾಯುವ ಮೊದಲು ಅವಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು ಎಂದು ಅವರ ಕುಟುಂಬ ತಿಳಿಸಿದೆ. ತಮ್ಮ ಮಗಳ ಸಾವಿನಿಂದ ಉಂಟಾದ ಆಘಾತದಿಂದಾಗಿ ಮೊದಲು ದೂರು ದಾಖಲಿಸಲು ಸಾಧ್ಯವಾಗಲಿಲ್ಲ. ತಮ್ಮ ಮಗಳ ಮೊಬೈಲ್ ಫೋನ್ನಲ್ಲಿ ಸಾಯುವ ಮೊದಲು ರೆಕಾರ್ಡ್ ಮಾಡಲಾದ ವೀಡಿಯೊ ಕಂಡುಬಂದ ನಂತರ ದೂರು ದಾಖಲಿಸಿದೆವು ಎಂದು ತಿಳಿಸಿದ್ದಾರೆ. ಅಲ್ಲದೇ ಡಿಸೆಂಬರ್ 20 ರಂದು ಪೊಲೀಸರು ಮತ್ತು ಮುಖ್ಯಮಂತ್ರಿಗಳ ಸಹಾಯವಾಣಿಗೆ ದೂರು ನೀಡಿದ್ದರೂ ಅವರು ಪ್ರತಿಕ್ರಿಯಿಸಲಿಲ್ಲ ಎಂದು ವಿಕ್ರಮ್ ಸಿಂಗ್ ಆರೋಪಿಸಿದ್ದಾರೆ.
