ಉದಯವಾಹಿನಿ, ಭೋಪಾಲ್: ಇಂದೋರ್ನಲ್ಲಿ ನೀರು ಇರಲಿಲ್ಲ ಹಾಗಾಗಿ ಕುಡಿಯೋಕೆ ವಿಷ ಹಂಚಲಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.ದೇಶದ ನಂ.1 ಸ್ವಚ್ಛ ನಗರಿ ಆಗಿರುವ ಇಂದೋರ್ನಲ್ಲಿ ಕಲುಷಿತ ನೀರು ಸೇವಿಸಿ 14 ಮಂದಿ ಸಾವನ್ನಪ್ಪಿದ್ದ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಆಡಳಿತಾರೂಢ ಬಿಜೆಪಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಆಡಳಿತ ಗಾಢ ನಿದ್ರೆಯಲ್ಲಿದೆ. ಇಂದೋರ್ನಲ್ಲಿ ನೀರು ಇರಲಿಲ್ಲ, ಆದ್ದರಿಂದ ವಿಷ ಹಂಚಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈಗ ಅಲ್ಲಿನ ಪ್ರತಿ ಮನೆಯಲ್ಲೂ ಶೋಕ ಮಡುಗಟ್ಟಿದೆ. ಬಡವರು ಅಸಹಾಯಕರಾಗಿದ್ದಾರೆ. ಆದ್ರೆ ಬಿಜೆಪಿ ನಾಯಕರು ದುರಹಂಕಾರದ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಮನೆ ದೀಪ ಆರಿಹೋದವರಿಗೆ ಸಾಂತ್ವನ ಹೇಳುವುದನ್ನ ಬಿಟ್ಟು, ಧಿಮಾಕಿನ ಹೇಳಿಕೆಗಳನ್ನ ನೀಡುತ್ತಿದೆ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಶ್ನೆಗಳ ಸುರಿಮಳೆ: ಕಲುಷಿತ ಹಾಗೂ ದುರ್ವಾಸನೆ ಬೀರುವ ನೀರಿನ ಬಗ್ಗೆ ಜನರು ಪದೇ ಪದೇ ದೂರು ನೀಡುತ್ತಾ ಬಂದಿದ್ದರು. ಆದ್ರೆ ಸರ್ಕಾರ ಅವರ ದೂರುಗಳನ್ನ ಏಕೆ ಆಲಿಸಿಲ್ಲ? ಕುಡಿಯೋ ನೀರಿನೊಂದಿಗೆ ಕೊಳಚೆ ನೀರು ಹೇಗೆ ಬೆರೆತುಹೋಯಿತು? ಸಕಾಲದಲ್ಲಿ ಏಕೆ ನೀರು ಸರಬರಾಜು ಮಾಡಲಿಲ್ಲ? ಜವಾಬ್ದಾರಿಯುತ ಅಧಿಕಾರಿಗಳು ಮತ್ತು ನಾಯಕರ ವಿರುದ್ಧ ಕ್ರಮ ಕೈಗೊಳ್ಳೋದು ಯಾವಾಗ? ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ.
