ಉದಯವಾಹಿನಿ, ವಾರಾಣಸಿ: ನವಜಾತ ಶಿಶುಗಳನ್ನು ಎಷ್ಟು ಜೋಪಾನ ಮಾಡಿದರೂ ಸಾಲುವುದಿಲ್ಲ. ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು ಅವುಗಳ ಜೀವಕ್ಕೆ ಕುತ್ತು ತರುತ್ತವೆ ಎನ್ನುವ ಕುರಿತು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಇದೀಗ ಇಂತಹ ಒಂದು ಘಟನೆ ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಮಿರ್ಜಾಮುರಾದ್ ಪ್ರದೇಶದಲ್ಲಿ ನಡೆದಿದೆ. ಮಗುವಿಗೆ ಚಳಿಯಾಗುತ್ತದೆ ಎಂದು ಗುರುವಾರ ರಾತ್ರಿ ಮಲಗುವಾಗ ದಪ್ಪ ಹೊದಿಕೆ ಮಗುವಿಗೆ ಹಾಕಿದ್ದೆ ಮಗುವಿನ ಸಾವಿಗೆ ಕಾರಣವಾಗಿದೆ. ಸುಮಾರು ಒಂದು ತಿಂಗಳ ಮಗು ದಪ್ಪ ಹೊದಿಕೆಯಿಂದ ಸಾವನ್ನಪ್ಪಿದೆ.
ರಾತ್ರಿಯಲ್ಲಿ ಮಗುವಿಗೆ ಹಾಲುಣಿಸಿದ್ದ ತಾಯಿ ಕೊರೆಯುವ ಚಳಿ ಇದ್ದುದರಿಂದ ಮಲಗುವ ಮೊದಲು ತನ್ನನ್ನು ಮತ್ತು ನವಜಾತ ಶಿಶುವಿನ ಮೇಲೆ ದಪ್ಪ ಹೊದಿಕೆ ಹಾಕಿದ್ದಳು. ಆದರೆ ತೀವ್ರ ಶೀತದ ವಾತಾವರಣದ ಕಾರಣದಿಂದ ಮಗು ಸಾವನ್ನಪ್ಪಿದೆ. 25 ದಿನಗಳ ಶಿಶುವಿಗೆ ಮಗುವಿನ ತಾಯಿ ರಾತ್ರಿಯಲ್ಲಿ ಹಾಲುಣಿಸಿ ಮಲಗಿಸಿದ್ದಳು. ಬೆಳಗ್ಗೆ ಎದ್ದಾಗ ಮಗು ಪ್ರತಿಕ್ರಿಯಿಸಲಿಲ್ಲ. ಕುಟುಂಬವು ತಕ್ಷಣ ಮಗುವನ್ನು ಮೋಹನ್ಸರೈನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು.
ಬೇನಿಪುರ ಗ್ರಾಮವದಲ್ಲಿ ನಡೆದ ಈ ಘಟನೆ ಸಂಪೂರ್ಣ ಗ್ರಾಮವನ್ನೇ ದುಃಖದಲ್ಲಿ ಮುಳುಗಿಸಿದೆ. ಗ್ರಾಮದ ನಿವಾಸಿ ರಾಹುಲ್ ಕುಮಾರ್ ಎರಡು ವರ್ಷಗಳ ಹಿಂದೆ ಸುಧಾ ದೇವಿಯನ್ನು ವಿವಾಹವಾಗಿದ್ದರು. 25 ದಿನಗಳ ಹಿಂದೆ ಅವರ ಮೊದಲ ಮಗುವಿನ ಜನನವಾಗಿದ್ದು, ಇದರಿಂದ ಕುಟುಂಬ ತುಂಬಾ ಸಂತೋಷವಾಗಿತ್ತು. ಮಗು ಜನಿಸಿದಾಗ ಎಲ್ಲರೂ ತುಂಬಾ ಸಂತೋಷಪಟ್ಟರು. ಇಂತಹ ಘಟನೆ ಸಂಭವಿಸುತ್ತದೆ ಎಂದು ನಾವು ಎಂದಿಗೂ ಊಹಿಸಿರಲಿಲ್ಲ ಎಂದು ಮಗುವಿನ ತಂದೆ ಹೇಳಿದರು. ಶಿಶುವಿನ ಅಂತ್ಯಕ್ರಿಯೆಯನ್ನು ಹಿಂದೂ ಪದ್ಧತಿಗಳ ಪ್ರಕಾರ ಗಂಗಾ ನದಿಯ ದಡದಲ್ಲಿ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!