ಉದಯವಾಹಿನಿ, ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಹರಿಯಾಣದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ಗೆ ಮತ್ತೆ ಬಿಡುಗಡೆ ಭಾಗ್ಯ ಸಿಕ್ಕಿದೆ. 2017ರಲ್ಲಿ ಜೈಲು ಸೇರಿದ ಬಳಿಕ 15ನೇ ಬಾರಿಗೆ 40 ದಿನಗಳ ಅವಧಿಗೆ ಪೆರೋಲ್ ದೊರಕಿದೆ.
ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್ಗೆ ಇದು 2017ರಿಂದ 15ನೇ ಬಾರಿಗೆ ಪೆರೋಲ್ ಮಂಜುರಾಗಿದ್ದು, 40 ದಿನಗಳ ಅವಧಿಗೆ ನೀಡಲಾಗಿದೆ. ಇಂದು (ಜ.5) ರೋಹ್ಟಕ್ನಲ್ಲಿರುವ ಸುನಾರಿಯಾ ಜೈಲಿನಿಂದ ಹೊರಬಂದಿದ್ದು, ಈ ಅವಧಿಯಲ್ಲಿ ಸಿರ್ಸಾ ಪ್ರಧಾನ ಕಚೇರಿಯ ಡೇರಾದಲ್ಲಿಯೇ ಇರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ 2025ರ ಆಗಸ್ಟ್ ತಿಂಗಳಲ್ಲಿ 40 ದಿನಗಳ ಕಾಲ 14ನೇ ಬಾರಿಗೆ ಪೆರೋಲ್ ನೀಡಲಾಗಿತ್ತು. ಅದಲ್ಲದೇ 2025ರ ಏಪ್ರಿಲ್ನಲ್ಲಿ 21 ದಿನ ಹಾಗೂ 2025ರ ಜನವರಿಯಲ್ಲಿ 30 ದಿನಗಳ ಕಾಲ ಪೆರೋಲ್ ನೀಡಲಾಗಿತ್ತು.ಡೇರಾ ಸಚ್ಚಾ ಸೌದಾದಲ್ಲಿ ಇಬ್ಬರು ಶಿಷ್ಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 2017ರಲ್ಲಿ ಆತನಿಗೆ 20 ವರ್ಷಗಳ ಶಿಕ್ಷೆ ವಿಧಿಸಿತ್ತು. 2019ರಲ್ಲಿ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಪ್ರಕರಣದಲ್ಲೂ ರಾಮ್ ರಹಿಮ್ ಸೇರಿದಂತೆ ಇತರ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಈ ಹಿಂದೆ ಪಂಜಾಬ್, ಹರಿಯಾಣ ಮತ್ತು ನೆರೆಯ ರಾಜ್ಯಗಳಲ್ಲಿ ಚುನಾವಣೆಗಳ ಸಮಯದಲ್ಲಿ ಆತನಿಗೆ ಪೆರೋಲ್ ನೀಡಲಾಗಿತ್ತು. ಕಳೆದ ಅಕ್ಟೋಬರ್ನಲ್ಲಿ ಹರಿಯಾಣ ಉಪಚುನಾವಣೆಯ ಸಮಯದಲ್ಲಿ 40 ದಿನಗಳವರೆಗೆ. ಅದಕ್ಕೂ ಮೊದಲು, 2020ರಲ್ಲಿ ಹರಿಯಾಣ ವಿಧಾನಸಭಾ ಚುನಾವಣೆ ಸಮಯದಲ್ಲಿ 40 ದಿನ ಪೆರೋಲ್ ನೀಡಲಾಗಿತ್ತು. ಅಲ್ಲದೇ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆಯೂ ಪೆರೋಲ್ ಮಂಜೂರು ಮಾಡಲಾಗಿತ್ತು.
