ಉದಯವಾಹಿನಿ, ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ಚೆನ್ನಯ್ಯನ ಕೋಟೆ ಗ್ರಾಮದ ಕಾಫಿ ತೋಟದಲ್ಲಿ ಬೀಡುಬಿಟ್ಟು, ದಾಂಧಲೆ ನಡೆಸುತ್ತಿದ್ದ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಕಾಡಿಗಟ್ಟಿದೆ. ಇಂದು ಬೆಳಗ್ಗೆಯಿಂದ ಚೆನ್ನಯ್ಯನ ಕೋಟೆ ಗ್ರಾಮ ವ್ಯಾಪ್ತಿಯ ವಿವಿಧ ಕಾಫಿ ತೋಟಗಳಲ್ಲಿ ಬಿಡು ಬಿಟ್ಟಿದ್ದ 10ಕ್ಕೂ ಅಧಿಕ ಕಾಡಾನೆಗಳನ್ನ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಆರ್ಆರ್ಟಿ ಮತ್ತು ಆನೆ ಕಾರ್ಯ ಪಡೆಯ ತಂಡದ ಸಿಬ್ಬಂದಿ ಕಾಡಿಗಟ್ಟಿದ್ದಾರೆ. ಈ ಸಂದರ್ಭದಲ್ಲಿ ಮರಿಯಾನೆಗಳೊಂದಿಗೆ ಇದ್ದ ಕಾಡಾನೆಗಳು ಕಾಫಿ ತೋಟ ಬಿಟ್ಟು ಕಾಡಿನತ್ತ ತೆರಳಲು ಹಿಂದೇಟು ಹಾಕಿದವು ಎಂದು ಕಾರ್ಯಚರಣೆ ತಂಡದ ಸಿಬ್ಬಂದಿ ತಿಳಿಸಿದರು. ಆದಾಗ್ಯೂ ಹರಸಾಹಸ ಪಟ್ಟು ದೇವಮ್ಮಚ್ಚಿ ಅರಣ್ಯಕ್ಕೆ ಅಟ್ಟವಲ್ಲಿ ಅರಣ್ಯ ಇಲಾಖೆ ತಂಡ ಯಶಸ್ವಿಯಾಯಿತು.
