ಉದಯವಾಹಿನಿ, ಬೆಂಗಳೂರು: ಎಸ್ಎಸ್ಎಲ್ಸಿ ಪ್ರಿಪರೇಟರಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮಹತ್ವದ ವಿಚಾರ ಬಯಲಾಗಿದೆ. ಈ ಕೃತ್ಯದಲ್ಲಿ 6 ಶಿಕ್ಷಕರು ಹಾಗೂ 9 ವಿದ್ಯಾರ್ಥಿಗಳು ಭಾಗಿಯಾಗಿದ್ದು, ಕೆಲವರಿಗೆ 30 ರೂ.ಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿರುವ ವಿಚಾರ ತಿಳಿದು ಬಂದಿದೆ. ಪ್ರಶ್ನೆ ಪತ್ರಿಕೆ ಪಡೆದ ಕೆಲವು ವಿದ್ಯಾರ್ಥಿಗಳು ಬರೀ 30 ರೂ.ಗೆ ಮಾರಾಟ ಮಾಡಿದ್ದಾರೆ. ಇನ್ನು ಕೆಲವರು 50 ರೂ. 100 ರೂ. ಹಾಗೂ 150 ರೂ.ಗೆ ಮಾರಾಟ ಮಾಡಿದ್ದಾರೆ. ಮಾರಾಟ ಮಾಡಿ ಬಂದಿರೋ ಹಣ 1500 ರೂ. ಆಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಶಿಕ್ಷಕರ ಬ್ಯಾಂಕ್ ಅಕೌಂಟ್ಗಳನ್ನು ಸೈಬರ್ ಕ್ರೈಂ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಆದರೆ, ಸೋರಿಕೆ ಮಾಡಲು ಹಣ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಶಿಕ್ಷಕರು ತಮ್ಮ ಐಡಿಗಳ ಮೂಲಕ ಡೌನ್ಲೋಡ್ ಮಾಡಿದ್ದು, ವಿದ್ಯಾರ್ಥಿಗಳಿಗೆ ನೀಡಿರೋದು ಬಯಲಾಗಿದೆ. ಬಂಧಿತ ಶಿಕ್ಷಕರ ಕುಟುಂಬಸ್ಥರ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಯಾರೆಲ್ಲ ಸಂಪರ್ಕ ಮಾಡಿ ಪ್ರಶ್ನೆ ಪತ್ರಿಕೆ ಪಡೆದಿದ್ದರು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಪ್ರಕರಣ ಆದ ಬಳಿಕ ಕೆಲವರು ಸಾಮಾಜಿಕ ಜಾಲತಾಣಗಳ ಐಡಿಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ವಿದ್ಯಾರ್ಥಿಗಳ ಇನ್ ಬಾಕ್ಸ್ನಲ್ಲಿ ಯಾರೆಲ್ಲ ಸಂಪರ್ಕ ಮಾಡಿದ್ದರು ಎಂಬ ಲೀಸ್ಟ್ ತಯಾರಾಗಿದ್ದು, ಲೀಸ್ಟ್ ಪ್ರಕಾರವಾಗಿ ಐಪಿ ಅಡ್ರೆಸ್ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
