ಉದಯವಾಹಿನಿ, ಶಿವಮೊಗ್ಗ: ಮಲೆನಾಡು ಗುಡಿ ಕೈಗಾರಿಕೆ, ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಹಾಗೂ ಅವುಗಳ ಪರಿಚಯ ಮಾಡುವ ಸಲುವಾಗಿ ಆಯೋಜಿಸಿರುವ ಮಲೆನಾಡ ಕರಕುಶಲ ಉತ್ಸವ, ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನ ಜನರ ಗಮನ ಸೆಳೆಯುತ್ತಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಅಲ್ಲಮಪ್ರಭು ಮೈದಾನದಲ್ಲಿ ಗಣರಾಜ್ಯೋತ್ಸವದ ನಿಮಿತ್ತ ಇಂದಿನಿಂದ ಮೂರು ದಿನಗಳ ಕಾಲ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಎಂಟ್ರಿ ಕೊಡುತ್ತಿದ್ದಂತೆ ಸ್ವಾಗತಿಸುವ ‘ನಮ್ಮ ಶಿವಮೊಗ್ಗ’ ಘೋಷವಾಕ್ಯವಿದೆ. ಬಳಿಕ ಪುಷ್ಪದಲ್ಲಿ ನಿರ್ಮಾಣವಾದ ಕೆಳದಿಯ ಶಿವಪ್ಪ ನಾಯಕನ ಪ್ರತಿಮೆ, ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯ ಕೇದಾರನಾಥ ದೇವಾಲಯ ಹಾಗೂ ಜಗತ್ ಪ್ರಸಿದ್ಧ ಜೋಗ ಜಲಪಾತ ಜನಾಕರ್ಷಕವಾಗಿದೆ. ಇದರ ಸುತ್ತ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ಮಳಿಗೆ ಸೂಜಿಗಲ್ಲಿನಂತೆ ಸೆಳೆಯುತ್ತವೆ.
ಇಲ್ಲಿ ಶಿವಮೊಗ್ಗದ ಹಾರನಹಳ್ಳಿ ಮಹಿಳೆಯಿಂದ ಮಾಡಲ್ಪಡುವ ವಿವಿಧ ಮಣ್ಣಿನ ದೀಪಗಳು, ವಿವಿಧ ಅಲಂಕಾರಿಕ ವಸ್ತುಗಳು, ಕೊಪ್ಪಳದ ಕಿನ್ನಾಳೆ ಹಾಗೂ ಚನ್ನಪಟ್ಟಣದ ಗೊಂಬೆಗಳು, ಕೈಯಿಂದ ಕೆತ್ತನೆ ಮಾಡಿದ ಬಿದಿರಿನ ವಾಟರ್ ಬಾಟಲಿ, ಮರದ ಲ್ಯಾಂಪ್, ಗಂಡಭೇರುಂಡ ಸೇರಿದಂತೆ ಎಲ್ಲವೂ ಸುಂದರ ಮತ್ತು ಅತ್ಯಾಕರ್ಷಕ.
ಅದಲ್ಲದೇ ಕೃಷಿ ಇಲಾಖೆಯ ಸಿರಿಧಾನ್ಯದ ರಂಗೋಲಿ ಅದ್ಭುತವಾಗಿದೆ. ಇದರಲ್ಲಿ ಆನೆಗುಂದಿಯ ಬಾಳೆ ನಾರಿನಿಂದ ತಯಾರಾದ ವಿವಿಧ ವಸ್ತುಗಳು ಹಾಗೂ ಮೆಕ್ಕೆಜೋಳದ ಸಿಪ್ಪೆಯಿಂದ ತಯಾರಾದ ಅಲಂಕಾರಿಕ ಹೂವುಗಳು ಹಾಗೂ ಜೋಳದ ಸಿಪ್ಪೆಯಿಂದ ತಯಾರಾದ ಸಿರಿಯಲ್ ದೀಪ. ಉಳಿದಂತೆ ಕೈಮಗ್ಗ, ರೇಷ್ಮೆ, ಕೃಷಿ ಸಂಬಂಧಿತ ವಿವಿಧ ತರಕಾರಿ, ಹಣ್ಣುಗಳು ಗಮನ ಸೆಳೆಯುತ್ತಿವೆ.
ಬೇರೆ ಜಿಲ್ಲೆಗಳಿಂದಲೂ ಆಗಮಿಸಿದ ಜನ: ಈ ಮೇಳಕ್ಕೆ ಜಿಲ್ಲೆಯ ಜನರಷ್ಟೇ ಅಲ್ಲ ಬೇರೆ ಬೇರೆ ಜಿಲ್ಲೆಯ ಜನರು ಭೇಟಿ ನೀಡುತ್ತಿದ್ದಾರೆ. ಮೇಳಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪುತ್ರ ಸಂಸದ ರಾಘವೇಂದ್ರ ಮತ್ತು ಕುಟುಂಬಸ್ಥರ ಜೊತೆ ಆಗಮಿಸಿ ಪ್ರತಿಯೊಂದು ಮಳಿಗೆಗಳಿಗೂ ಭೇಟಿ ನೀಡಿದರು. ಕರಕುಶಲ ಮಳಿಗೆಗಳಷ್ಟೆ ವಾಣಿಜ್ಯ ಮಳಿಗೆಗಳು ಇವೆ.
ಫಲಪುಷ್ಪ ಪ್ರದರ್ಶನ ಮತ್ತು ಮಲೆನಾಡ ಕರಕುಶಲ ವಸ್ತು ಪ್ರದರ್ಶನದ ಆಯೋಜಕರಾದ ಜಿಲ್ಲಾ ಪಂಚಾಯತ್ ಸಿಇಒ ಹೇಮಂತ ಕುಮಾರ್ ಮಾತನಾಡಿ, ಇಂದಿನಿಂದ ಜನವರಿ 26 ರ ತನಕ ಅಲ್ಲಮ ಪ್ರಭು ಮೈದಾನದಲ್ಲಿ ಕರಕುಶಲ ಉತ್ಸವ ಹಾಗೂ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ಇಲ್ಲಿ ಪ್ರವಾಸಿ ತಾಣಗಳಾದ ಶಿವಪ್ಪ ನಾಯಕನ ಪ್ರತಿಮೆ, ಬಳ್ಳಿಗಾವಿಯ ಕೇದಾರೆಶ್ವರ ದೇವಾಲಯ, ಜೋಗ ಜಲಪಾತವನ್ನು ಪುಷ್ಪದಲ್ಲಿ ಮರುಸೃಷ್ಟಿ ಮಾಡಿದ್ದೇವೆ. ಅದು ಅಲ್ಲದೇ, ಕರಕುಶಲ ವಸ್ತು ಪ್ರದರ್ಶನದಲ್ಲಿ 72 ವಸ್ತುಗಳನ್ನು ಪ್ರದರ್ಶನ ಮಾಡುತ್ತಿದ್ದೇವೆ. ಅದರಲ್ಲಿ ಮುಖ್ಯವಾಗಿ ಚನ್ನಪಟ್ಟಣದ ಗೊಂಬೆ, ಹಸೆ ಚಿತ್ತಾರ, ಮಣ್ಣಿನ ಆಭರಣ, ಬಿದರಿನ ಕರಕುಶಲ ವಸ್ತುಗಳು ಹಾಗೂ ಕೈಮಗ್ಗದವರಿಗೆ ಮೈಸೂರು ಸಿಲ್ಕ್ಸ್, ಬಂಗಾಳ, ಬಿಹಾರ, ತಮಿಳುನಾಡು, ಉಡುಪಿ ಸಿಲ್ಕ್ಸ್ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಪ್ರದರ್ಶಿಸಲಾಗುತ್ತಿದೆ. ಜಿಲ್ಲೆಯ ಜನರು ಭೇಟಿ ನೀಡಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿನಂತಿ ಮಾಡಿಕೊಂಡರು.
