ಉದಯವಾಹಿನಿ, ಢಾಕಾ: ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಕಾನೂನು ಬಾಹಿರ ಮತ್ತು ಹಿಂಸಾತ್ಮಕ ಆಡಳಿತ ನಡೆಸುತ್ತಿದ್ದಾರೆ. ದೇಶವನ್ನ ಭಯೋತ್ಪಾದನೆ, ಕಾನೂನು ಬಾಹಿರತೆ ಹಾಗೂ ಪ್ರಜಾಪ್ರಭುತ್ವ ಗಡಿಪಾರು ಯುಗವನ್ನಾಗಿ ಮಾಡಿದ್ದಾರೆ. ಯೂನಸ್ ಆಡಳಿತದಿಂದ ತಾಯ್ನಾಡಿನ ರಕ್ತ ಸೋರುತ್ತಿದೆ. ಹಾಗಾಗಿ ಮಧ್ಯಂತರ ಸರ್ಕಾರವನ್ನ ಕಿತ್ತೊಗೆಯಬೇಕು ಎಂದು ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಕರೆ ಕೊಟ್ಟಿದ್ದಾರೆ.
2024 ರ ವರ್ಷದಲ್ಲಿ ಬಾಂಗ್ಲಾದೇಶದಿಂದ ಫಲಾಯನ ಮಾಡಿದ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ದೆಹಲಿಯಲ್ಲಿ ನಡೆದ ಸಭೆಯಲ್ಲಿ ಬಾಂಗ್ಲಾದ ಜನರನ್ನ ಉದ್ದೇಶಿಸಿ ಆಡಿಯೋ ಸಂದೇಶದ ಮೂಲಕ ಮಾತನಾಡಿ, ಯೂನಸ್ ಆಡಳಿತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಭದ್ರತಾ ಕಾರಣಗಳಿಗಾಗಿ ವೀಡಿಯೊ ಬಳಸಲಿಲ್ಲ ಎಂದು ವರದಿಯಾಗಿದೆ.
ಯೂನಸ್ ಸರ್ವಾಧಿಕಾರಿ, ಕೊಲೆಗಾರ, ಅಧಿಕಾರದ ದುರಾಸೆಯಿಂದ ಆಡಳಿತ ನಡೆಸುತ್ತಿದ್ದಾರೆ. ನನ್ನ ಪದಚ್ಯುತಿ ಬಳಕಿ ಇಡೀ ರಾಷ್ಟ್ರ ಕೊಲೆಗಾರನ ಅರಾಜಕತೆಗೆ ಧುಮುಕಿದೆ. ವಿದೇಶಿ ಆಡಳಿತದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಬಾಂಗ್ಲಾದೇಶದ ನಾಗರಿಕರು ಇದಕ್ಕೆ ಅವಕಾಶ ಕೊಡಬಾರದು. ಪ್ರಜಾಪ್ರಭುತ್ವವನ್ನ ಮರಳಿ ಪಡೆಯಲು ಯಾವುದೇ ಬೆಲೆ ತೆತ್ತಾದರೂ, ಯೂನಸ್ ಸರ್ಕಾರವನ್ನ ಉರುಳಿಸಬೇಕು. ಇದಕ್ಕಾಗಿ ಎಲ್ಲರೂ ಒಟ್ಟಾಗಬೇಕು ಎಂದು ಕರೆ ನೀಡಿದರು.
