ಉದಯವಾಹಿನಿ , ಬೆಂಗಳೂರು: ಸಂವಿಧಾನವನ್ನ ದುರ್ಬಲಗೊಳಿಸುವ ಪ್ರಯತ್ನ ನಡೆಸುವುದು ವಿಷ ಉಣಿಸುವ ಸಂಚು. ಸಂವಿಧಾನವನ್ನ ನಾವು ರಕ್ಷಿಸಿದ್ರೆ ಸಂವಿಧಾನ ನಮ್ಮನ್ನ ರಕ್ಷಿಸುತ್ತದೆ. ದೇಶ ಸುಭದ್ರವಾಗಿ ಉಳಿಯುತ್ತದೆ. ಹೀಗಾಗಿ ನಾವೆಲ್ಲರೂ ಗಣರಾಜ್ಯೋತ್ಸವದ ದಿನವಾದ ಇಂದು ಸಂವಿಧಾನವನ್ನ ರಕ್ಷಿಸುವ ಪ್ರತಿಜ್ಞೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದರು. ಭಾರತವು ತನ್ನನ್ನು ಆಳಿಕೊಳ್ಳಲು ರಚಿಸಿಕೊಂಡ ಸಂವಿಧಾನ ಜಾರಿಗೆ ಬಂದು ಇದೇ ಜನವರಿ 26ಕ್ಕೆ 76 ವರ್ಷಗಳು ಪೂರ್ಣಗೊಂಡಿದೆ. 77ನೇ ಗಣರಾಜ್ಯೋತ್ಸವದ ಶುಭ ದಿನವಾದ ಇಂದು ಸಂವಿಧಾನದ ಮಹತ್ವ ಮತ್ತು ಪ್ರಜಾಪ್ರಭುತ್ವವನ್ನ ಬಲಪಡಿಸುವ ಒಂದಿಷ್ಟು ಚಿಂತನೆಗಳನ್ನ ನನ್ನ ನಾಡಿನ ಜನತೆಯಲ್ಲಿ ಹಂಚಿಕೊಳ್ಳಬಯಸುತ್ತೇನೆ. ಭಾರತದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ನ್ಯಾಯವನ್ನು, ಚಿಂತನೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿಪಡಿಸಲು ಎಲ್ಲರ ನಡುವೆ ಭ್ರಾತೃತ್ವವನ್ನು ಉದ್ದೀಪನಗೊಳಿಸುವುದೇ ಸಂವಿಧಾನದ ಆಶಯವಾಗಿದೆ ಎಂದು ವಿವರಿಸಿದರು.
ಅನುಭವ ಮಂಟಪ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾದರಿ
ಕರ್ನಾಟಕದಲ್ಲಿ 800 ವರ್ಷಗಳ ಹಿಂದೆಯೇ ಪ್ರಜಾರಾಜ್ಯದ ಬೀಜಾಂಕುರವಾಗಿತ್ತು ಅನ್ನೋದನ್ನ ನಾವು ನೆನಪು ಮಾಡಿಕೊಳ್ಳಬೇಕಾಗಿದೆ. ಅದು ಸಾಧ್ಯವಾಗಿರುವುದು ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ನೇತೃತ್ವದಲ್ಲಿ ನಡೆದಿದ್ದ ಶರಣ ಚಳವಳಿಯಿಂದ. ಕೂಡಲ ಸಂಗಮದ ಅನುಭವ ಮಂಟಪ ಪ್ರಪಂಚದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾದರಿ ಸ್ವರೂಪದ್ದು. ಸಮಾಜದ ಅತ್ಯಂತ ಕೆಳಸ್ತರದ ಜನರೂ ಕೂಡಾ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಅಭಿಪ್ರಾಯ, ಅಹವಾಲುಗಳನ್ನ ವ್ಯಕ್ತಪಡಿಸುವ ಸಮಾನವಕಾಶ ಅನುಭವ ಮಂಟಪದಲ್ಲಿತ್ತು. ಇದು ನಾವಿಂದು ಅನುಭವಿಸುತ್ತಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಗಲ್ಲು. 5) ಭಾರತದಲ್ಲಿ ನ್ಯಾಯಯುತ ಸಾಮಾಜಿಕ ವ್ಯವಸ್ಥೆಯನ್ನ ನಿರ್ಮಿಸುವ ಈ ತೀರ್ಮಾನ ಒಂದು ಚಾರಿತ್ರಿಕೆ ಸಂದರ್ಭದಲ್ಲಿ ಮೈದಾಳಿತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಈಗಿನ ಸಂವಿಧಾನ ಅಂಗೀಕಾರವಾಗುವುದಕ್ಕಿಂತ ಮೊದಲು ಭಾರತದಲ್ಲಿ ಒಂದು ಅಲಿಖಿತ ಸಂವಿಧಾನ ಇತ್ತು. ಅದು ಅಸಮಾನತೆಯನ್ನ ಒಪ್ಪಿಕೊಂಡ, ಲಿಂಗ ಮತ್ತು ಜಾತಿ ಆಧಾರದಲ್ಲಿಯೇ ಮನುಷ್ಯನ ಯೋಗ್ಯತೆ, ಅವಕಾಶಗಳನ್ನು ನಿರ್ಧರಿಸುವ ಅಲಿಖಿತ ಸಂವಿಧಾನ. ಆ ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಕೆಲವು ವರ್ಗಗಳು ಅಂದರೆ ಶೂದ್ರರು, ಮಹಿಳೆಯರು ಮತ್ತು ಅಸ್ಪೃಶ್ಯರು ಸಂಪತ್ತನ್ನ ಹೊಂದುವ, ಜ್ಞಾನವನ್ನು ಗಳಿಸುವ, ಘನತೆಯಿಂದ ಬದುಕುವ ಹಕ್ಕಿನಿಂದ ವಂಚಿತರಾಗಿದ್ದರು. ಈ ಮನುಷ್ಯ ವಿರೋಧಿ ಅಲಿಖಿತ ಸಂವಿಧಾನವನ್ನು ತಿರಸ್ಕರಿಸಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೊಸದೊಂದು ಸಂವಿಧಾನವನ್ನು ಭಾರತಕ್ಕೆ ನೀಡಿದರು ಎಂದು ಹೇಳಿದರು.
