ಉದಯವಾಹಿನಿ, ಡೆಹ್ರಾಡೂನ್: ಶತಮಾನಗಳ ಹಳೆಯ ಬದ್ರಿನಾಥ್ ಮತ್ತು ಕೇದಾರನಾಥ್ ದೇವಸ್ಥಾನಗಳಿಗೆ ಇನ್ನು ಮುಂದೆ ಹಿಂದೂಗಳಲ್ಲದವರ ಪ್ರವೇಶ ನಿರ್ಬಂಧಿಸುವ ಸಾಧ್ಯತೆ ಇದೆ.
ಬದ್ರಿನಾಥ್ ಮತ್ತು ಕೇದಾರನಾಥ್ ದೇವಾಲಯಗಳನ್ನು ನಿರ್ವಹಿಸುವ ದೇವಸ್ಥಾನ ಸಮಿತಿ ಈ ಕುರಿತ ಪ್ರಸ್ತಾಪವನ್ನು ಶೀಘ್ರದಲ್ಲೇ ಅಂಗೀಕರಿಸಲಿದೆ ಎನ್ನಲಾಗಿದೆ. ಬದ್ರಿನಾಥ್, ಕೇದಾರನಾಥ್ ಧಾಮ್ ಸೇರಿದಂತೆ ಆಡಳಿತ ಮಂಡಳಿಯ ಅಧೀನದಲ್ಲಿ ಬರುವ ಎಲ್ಲಾ ದೇಗುಲಗಳಲ್ಲಿಯೂ ಕೇವಲ ಹಿಂದೂಗಳಿಗೆ ಮಾತ್ರ ಪ್ರವೇಶ, ಹಿಂದೂಯೇತರರಿಗೆ ಪ್ರವೇಶವಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದೆ. ದೇವಸ್ಥಾನದ ಆಧ್ಯಾತ್ಮಿಕ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಮಿತಿಯ ಅಧ್ಯಕ್ಷ ಹೇಮಂತ್ ದ್ವಿವೇದಿ ಅವರ ಮಾಹಿತಿ ಪ್ರಕಾರ, ಬದ್ರಿನಾಥ್-ಕೇದಾರನಾಥ್ ಧಾಮ ಸೇರಿದಂತೆ ಸಮಿತಿಯ ಅಡಿಯಲ್ಲಿರುವ ಎಲ್ಲ ದೇವಾಲಯಗಳಿಗೆ ಹಿಂದೂಗಳಲ್ಲದವರ ಪ್ರವೇಶವನ್ನು ನಿಷೇಧಿಸಲಾಗುವುದು. ಈ ನಿಯಮವನ್ನು ಜಾರಿಗೆ ತರಲು ಮುಂಬರುವ ಸಮಿತಿ ಸಭೆಯಲ್ಲಿ ಅಧಿಕೃತ ಪ್ರಸ್ತಾಪವನ್ನು ಅಂಗೀಕರಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಧಾಮಗಳು ಕೇವಲ ಪ್ರವಾಸಿ ತಾಣಗಳಲ್ಲ, ಇವು ಕೋಟ್ಯಂತರ ಭಕ್ತರ ಶ್ರದ್ಧೆಯ ಸಂಕೇತಗಳಾಗಿವೆ ಎಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಚಾರ್ಧಾಮ್ ಯಾತ್ರೆಗೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಆದರೆ, ಈ ಸಂದರ್ಭದಲ್ಲಿ ಧಾರ್ಮಿಕ ನಂಬಿಕೆ ಇಲ್ಲದವರು ಅಥವಾ ಸನಾತನ ಧರ್ಮದ ಆಚಾರ-ವಿಚಾರಗಳ ಬಗ್ಗೆ ಅರಿವಿಲ್ಲದವರು ಕ್ಷೇತ್ರಗಳ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
