ಉದಯವಾಹಿನಿ, ಶಿರಡಿ: ಶಿರಡಿ ಸಾಯಿಬಾಬಾರಿಗೆ ದೇಶ-ವಿದೇಶಗಳಲ್ಲಿ ಲಕ್ಷಾಂತರ ಭಕ್ತರಿದ್ದಾರೆ. ಕ್ಷೇತ್ರದ ಭಕ್ತರು ತಮ್ಮ ಭಕ್ತಿಯನ್ನು ದರ್ಶನಕ್ಕೆ ಮಾತ್ರ ಸೀಮಿತವಾಗಿಡದೇ ಸೇವೆ, ತ್ಯಾಗ ಮತ್ತು ದಾನದ ಮೂಲಕ ನಿರಂತರವಾಗಿ ಅದನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ, ಗಣರಾಜ್ಯೋತ್ಸವದ ಮುನ್ನಾದಿನವಾದ ಭಾನುವಾರ ಅಮೆರಿಕದ ಸಾಯಿ ಭಕ್ತರಾದ ಅಂಕಿತಾ ರಾಜೇಂದ್ರ ಪಟೇಲ್ ಎಂಬವರು ಸಾಯಿಬಾಬಾಗೆ 1.01 ಕೋಟಿ ರೂಪಾಯಿ ಮೌಲ್ಯದ ಆಕರ್ಷಕ ಚಿನ್ನದ ಕಿರೀಟ ಅರ್ಪಿಸಿದರು. ಈ ಕಿರೀಟವನ್ನು ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋರಕ್ಷ ಗಡಿಕರ್ ಅವರಿಗೆ ಹಸ್ತಾಂತರಿಸಲಾಯಿತು. ಸಾಯಿಬಾಬಾ ಸಂಸ್ಥಾನದ ವತಿಯಿಂದ ಉದಾರ ದಾನ ನೀಡಿದ ಅಂಕಿತಾ ರಾಜೇಂದ್ರ ಪಟೇಲ್ ಅವರನ್ನು ಸನ್ಮಾನಿಸಲಾಯಿತು.

ಚಿನ್ನದ ಕಿರೀಟ ಸುಮಾರು 700 ಗ್ರಾಂ ತೂಗುತ್ತದೆ. ಇದರ ಮೌಲ್ಯ ₹1,01,38,100 ಎಂದು ಅಂದಾಜು ಮಾಡಲಾಗಿದೆ.ಇದನ್ನು ಹೊರತುಪಡಿಸಿ, ಸಾಯಿ ಭಕ್ತರು, ವಿವಿಧ ಕೈಗಾರಿಕಾ ಗುಂಪುಗಳು, ಬ್ಯಾಂಕುಗಳು ಮತ್ತು ಸಾಮಾಜಿಕ ಸಂಸ್ಥೆಗಳು ಸಾಯಿಬಾಬಾ ಟ್ರಸ್ಟ್‌ನ ವಿವಿಧ ಸೇವಾ ಯೋಜನೆಗಳೊಂದಿಗೆ ಸಹಕರಿಸುತ್ತಿವೆ. ಅದರಂತೆ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ  ತನ್ನ ಸಿಎಸ್‌ಆರ್ ನಿಧಿ ಮೂಲಕ ಸಾಯಿಬಾಬಾ ಟ್ರಸ್ಟ್‌ನ ಎರಡು ಆಸ್ಪತ್ರೆಗಳಿಗೆ ಒಟ್ಟು ₹1.93 ಕೋಟಿ ಮೌಲ್ಯದ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ದಾನವಾಗಿ ನೀಡಿದೆ.

ಇದರಲ್ಲಿ ಎರಡು ಅತ್ಯಾಧುನಿಕ 3D ನೆಫ್ರೋಸ್ಕೋಪಿ ಯಂತ್ರಗಳು, 2D ಕ್ಯಾಮೆರಾ ವ್ಯವಸ್ಥೆಗಳಿವೆ. ಇದನ್ನು ಸಂಸ್ಥೆಯ ಎರಡೂ ಆಸ್ಪತ್ರೆಗಳಲ್ಲಿ ಬಳಸಲಾಗುತ್ತದೆ. ಮೂತ್ರಪಿಂಡ ಸಂಬಂಧಿ ಕಾಯಿಲೆಗಳ ಹೆಚ್ಚು ನಿಖರ, ವೇಗ ಮತ್ತು ಪರಿಣಾಮಕಾರಿ ರೋಗನಿರ್ಣಯ ಮಾಡುವಿಕೆ ಹಾಗು ಚಿಕಿತ್ಸೆ ನೀಡಲು ಇದರಿಂದ ನೆರವಾಗುತ್ತದೆ ಎಂದು ಗೋರಖ್ ಗಡಿಕರ್ ಮಾಹಿತಿ ನೀಡಿದರು. ಸಾಯಿಬಾಬಾ ಟ್ರಸ್ಟ್‌ನ ಪ್ರಮುಖರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಂಡೆ ಅವರನ್ನು ವಿಶೇಷವಾಗಿ ಸನ್ಮಾನಿಸಿದರು. ಇಂತಹ ದೇಣಿಗೆಗಳು ಟ್ರಸ್ಟ್‌ನ ಆರೋಗ್ಯ ಸೇವೆಗಳು, ಭಕ್ತರಿಗೆ ಒದಗಿಸುವ ಸೇವೆಗಳು ಮತ್ತು ಸಾಮಾಜಿಕ ಯೋಜನೆಗಳಿಗೆ ಮತ್ತಷ್ಟು ಉತ್ತೇಜನ ನೀಡುತ್ತವೆ. ರೋಗಿಗಳಿಗೆ ಉತ್ತಮ ಗುಣಮಟ್ಟ ಮತ್ತು ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಅನುವಾಗುತ್ತದೆ ಎಂದು ಟ್ರಸ್ಟ್ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!