ಉದಯವಾಹಿನಿ, ನವದೆಹಲಿ: ಭಾರತದ ಆರ್ಥಿಕತೆಯನ್ನು ಹೆಚ್ಚು ಸ್ಥಿತಿಸ್ಥಾಪಕತ್ವ ಮತ್ತು ಸ್ವತಂತ್ರವಾಗಿಸಲು ಮುಂಬರುವ ಬಜೆಟ್ ಅನ್ನು ದೀರ್ಘಾವಧಿಯ ದೃಷ್ಟಿಕೋನದೊಂದಿಗೆ ಸಂಯೋಜಿಸಬೇಕು ಎಂದು ಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಬುಧವಾರ ಸಲಹೆ ನೀಡಿದ್ದಾರೆ.
ಜಗತ್ತು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು, ಆರ್ಥಿಕತೆಯ ಬೆಳವಣಿಗೆಯನ್ನು ವೇಗಗೊಳಿಸಬೇಕು ಎಂದು ರಾಜನ್ ಹೇಳಿದ್ದಾರೆ. ಪಿಟಿಐಗೆ ವಿಡಿಯೋ ಸಂದರ್ಶನ ನೀಡಿದ ಅವರು, ಭಾರತವು ಮೊದಲು ಐದು ವರ್ಷಗಳ ಯೋಜನೆಗಳನ್ನು ಹೊಂದಿತ್ತು. ಆಗಲೂ ದೇಶದ ಬಜೆಟ್ ಅವುಗಳೊಂದಿಗೆ ಉತ್ತಮವಾಗಿ ಸಂಯೋಜಿಸಲ್ಪಟ್ಟಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
2026-27ರ ಕೇಂದ್ರ ಬಜೆಟ್ ಅನ್ನು ದೀರ್ಘಾವಧಿಯ ದೃಷ್ಟಿಕೋನದೊಂದಿಗೆ ಸಂಯೋಜಿಸಬೇಕು ಎಂದು ನಾನು ಭಾವಿಸುತ್ತೇನೆ. ನಾವು ಹೇಗೆ ಹೆಚ್ಚು ಸ್ಥಿತಿಸ್ಥಾಪಕತ್ವ ಹೊಂದುತ್ತೇವೆ ಹಾಗೂ ಆರ್ಥಿಕವಾಗಿ ಸ್ವತಂತ್ರರಾಗುತ್ತೆವೋ ಆಗ ಹೆಚ್ಚು ಬೆಳವಣಿಗೆ ಕಾಣುತ್ತೇವೆ. ಇದರಿಂದ ಉಳಿದವರೆಲ್ಲರೂ ಭಾರತದೊಂದಿಗೆ ಸ್ನೇಹಿತರಾಗಲು ಬಯಸುತ್ತಾರೆ. ಹೀಗಾಗಬೇಕು ಎಂದರೆ ನ್ಯಾಯಯುತವಾದ ಕೆಲಸದ ಅಗತ್ಯವಿದೆ, ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮುಂದಿನ ಬಜೆಟ್ ನಮ್ಮನ್ನು ಅಲ್ಲಿಗೆ ಕರೆದೊಯ್ಯುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ರಾಜನ್ ಹೇಳಿದ್ದಾರೆ.
ಫೆಬ್ರವರಿ 1 ರಂದು ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದು, ಅಸ್ಥಿರ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ನಡುವೆ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಸುಧಾರಣಾ ಕ್ರಮಗಳನ್ನು ಘೋಷಿಸುವ ನಿರೀಕ್ಷೆ ಇದೆ. ಕೃತಕ ಬುದ್ಧಿಮತ್ತೆ (AI) ಯಲ್ಲಿನ ಅಗಾಧ ಹೂಡಿಕೆಯಿಂದ ನಾವು ಸಾಕಷ್ಟು ಸಕಾರಾತ್ಮಕ ಅವಕಾಶಗಳನ್ನು ನೋಡುತ್ತಿದ್ದೇವೆ ಎಂಬ ವಾಸ್ತವದ ಹೊರತಾಗಿಯೂ ಜಾಗತಿಕ ಮತ್ತು ಭಾರತೀಯ ಆರ್ಥಿಕತೆಗೆ ಇದು ಅತ್ಯಂತ ಅಪಾಯಕಾರಿ ಸಮಯ ಎಂದು ರಾಜನ್ ಹೇಳಿದರು.
ಆದರೆ, ನಮ್ಮನ್ನು ಹಿಂಡುವ ಮತ್ತು ದುರ್ಬಲರನ್ನಾಗಿ ಮಾಡುವ ಘಟಕಗಳ ಮೇಲೆ ಹೆಚ್ಚು ಅವಲಂಬಿತರಾಗುವುದರಿಂದ ಸಾಕಷ್ಟು ಅಪಾಯವಿದೆ. ಏಕೆಂದರೆ ನಮಗೆ ಹತ್ತಿರದಲ್ಲಿ ನೈಸರ್ಗಿಕ ಮಾರುಕಟ್ಟೆಗಳಿಲ್ಲ. ನಾವು ನಮ್ಮದೇ ಆದದ್ದನ್ನು ಹೊರತುಪಡಿಸಿ ಇತರರಿಗೆ ಪೂರೈಸಬಹುದಾದ ಮಾರುಕಟ್ಟೆಯನ್ನು ಹೊಂದಿಲ್ಲ ಎಂಬ ಬಗ್ಗೆ ಅವರು ಈ ಸಂದರ್ಭದಲ್ಲಿ ಬೆಳಕು ಚಲ್ಲಿದರು.
ಪ್ರಸ್ತುತ ಚಿಕಾಗೋ ಬೂತ್ನಲ್ಲಿ ಕ್ಯಾಥರೀನ್ ಡುಸಾಕ್ ಮಿಲ್ಲರ್ ಡಿಸ್ಟಿಂಗ್ವಿಶ್ಡ್ ಸರ್ವಿಸ್ ಪ್ರೊಫೆಸರ್ ಆಫ್ ಫೈನಾನ್ಸ್ ಆಗಿರುವ ರಾಜನ್, ಮುಂಬರುವ ಬಜೆಟ್ ಭಾರತವನ್ನು ಪೂರೈಕೆ ಸರಪಳಿಯಲ್ಲಿ ಉತ್ತಮವಾಗಿ ಸಂಯೋಜಿಸದಂತೆ ತಡೆಯುವ ಕೆಲವು ಸುಂಕ ದರಗಳನ್ನು ಕಡಿತಗೊಳಿಸಬಹುದು ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದರು. ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದ್ದು, ಅದನ್ನು ನಾವು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ ಎಂದು ರಾಜನ್ ಹೇಳಿದರು. ನಮ್ಮ ನೆರೆಹೊರೆಯವರಾದ ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ಸೇರಿದಂತೆ ಇತರ ದೇಶಗಳೊಂದಿಗೆ ನಾವು ಸಂಬಂಧಗಳನ್ನು ಸುಧಾರಿಸಿಕೊಳ್ಳಬೇಕಾಗಿದೆ ಎಂದು ಅವರು ಸಲಹೆ ನೀಡಿದರು.
