ಉದಯವಾಹಿನಿ , ಬೆಳಗಾವಿ: 400 ಕೋಟಿ ರು. ದರೋಡೆ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದು ಕೊಳ್ಳುತ್ತಿದೆ. ಮಹಾರಾಷ್ಟ್ರದ ಎಸ್ಐಟಿ ತಂಡ ನಡೆಸುತ್ತಿರುವ ನಿಧಾನಗತಿ ತನಿಖೆಗೆ ಬೇಸತ್ತ ದೂರು ದಾರ ಸಂದೀಪ್ ಪಾಟೀಲ ಕರ್ನಾಟಕದಲ್ಲಿ ದರೋಡೆ ಪ್ರಕರಣ ದಾಖಲಿಸಲು ತಯಾರಿ ನಡೆಸಿದ್ದಾರೆ. ಚೋರ್ಲಾ ಘಾಟ್ನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರು. ತುಂಬಿದ್ದ ಎರಡು ಕಂಟೇನರ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹಣಕ್ಕೆ ಒಳಗಾಗಿ ಕಿರುಕುಳ ಅನುಭವಿಸಿದ್ದ ಸಂದೀಪ್ ಪಾಟೀಲ ಮಹಾರಾಷ್ಟ್ರದಲ್ಲಿ ಪ್ರಕರಣ ದಾಖಲಿಸಿದ್ದರು.
ಆದರೆ ಪ್ರಕರಣದ ತನಿಖೆಯು ನಿರೀಕ್ಷಿಸಿದಷ್ಟು ವೇಗದಲ್ಲಿ ನಡೆಯದ ಹಿನ್ನೆಲೆಯಲ್ಲಿ ಕರ್ನಾಟಕ ದಲ್ಲಿ ಪ್ರಕರಣ ದಾಖಲಿಸಲು ದೂರುದಾರ ಮುಂದಾಗಿದ್ದಾರೆ.
400 ಕೋಟಿ ರು. ಹಣ ಇದ್ದ ಜೋಡಿ ಕಂಟೇನರ್ ಹೈಜಾಕ್ ಪ್ರಕರಣದ ಮೂಲ ಹುಡುಕುವುದೇ ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಚೋರ್ಲಾ ಘಾಟ್ನಲ್ಲಿ ದರೋಡೆ ಆಗಿದ್ದು ಒಂದು ಭಾಗ ವಾಗಿದ್ದರೆ ಕಂಟೇನರ್ನಲ್ಲಿ ಹಣವನ್ನು ಯಾವ ಜಾಗದಲ್ಲಿ ತುಂಬಿಸಲಾಯಿತು ಎಂಬುವುದೇ ಯಕ್ಷಪ್ರಶ್ನೆಯಾಗಿದೆ. ಮೂಲಗಳ ಪ್ರಕಾರ, 2025ರ ಸಪ್ಟೆಂಬರ್ನಲ್ಲಿ ಗೋವಾದಲ್ಲಿ ಎರಡು ಕಂಟೇನರ್ನಲ್ಲಿ 2 ಸಾವಿರ ಮುಖಬೆಲೆಯ ನೋಟು ತುಂಬಿಸಲಾಗಿದೆ.
