ಉದಯವಾಹಿನಿ,: ಮಣಿಪುರದಲ್ಲಿನ ಗಲಭೆ ಕುರಿತು ಚರ್ಚೆ ನಡೆಸಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸಿ ಪ್ರತಿಪಕ್ಷಗಳ ಸದಸ್ಯರು ಬುಧವಾರ ರಾಜ್ಯಸಭೆಯಿಂದ ಹೊರನಡೆದರು. ಊಟದ ಅವಧಿಯ ನಂತರ ಸಂಸತ್ತಿನ ಮೇಲ್ಮನೆಯಲ್ಲಿ ಕಲಾಪ ಆರಂಭವಾದಾಗ, ಉಪ ಸಭಾಪತಿ ಹರಿವಂಶ್ ಅವರು ಮಣಿಪುರ ವಿಷಯದ ಚರ್ಚೆಗೆ ವಿರೋಧ ಪಕ್ಷದ ಸದಸ್ಯರ ಬೇಡಿಕೆಯ ನಡುವೆಯೇ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರನ್ನು ಕರೆದು ಸಂವಿಧಾನ (ಪರಿಶಿಷ್ಟ ಪಂಗಡಗಳು) ಆದೇಶ (ಮೂರನೇ ತಿದ್ದುಪಡಿ) ಮಸೂದೆ, 2022 ಅನ್ನು ಮಂಡಿಸುವಂತೆ ಹೇಳಿದರು.ನಂತರ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಲಾಯಿತು. ಆಗ ಖರ್ಗೆ ತಮ್ಮ ಭಾಷಣದ ಸಮಯದಲ್ಲಿ, ಮೈಕ್ರೊಫೋನ್ ಅನ್ನು ಕಡಿತಗೊಳಿಸದಂತೆ ಅಥವಾ ಆಫ್ ಮಾಡದಂತೆ ಉಪಸಭಾಪತಿಗೆ ತಮಾಷೆಯ ರೀತಿಯಲ್ಲಿ ವಿನಂತಿಸಿದರು.ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ

ಅಲ್ಲದೆ, ಹರಿವಂಶ್ ಅವರು ಖರ್ಗೆ ಅವರಿಗೆ ನೀವು ಮಾತನಾಡಿದ ನಂತರ ತನ್ನ ಮಾತನ್ನೂ ಕೇಳುವಂತೆ ಕೇಳಿಕೊಂಡರು.
ಪ್ರತಿಪಕ್ಷಗಳು ಮಣಿಪುರ ವಿಷಯದ ಬಗ್ಗೆ ಚರ್ಚೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಈ ಸಂಬಂಧ ಹೇಳಿಕೆ ನೀಡಬೇಕೆಂದು ಬಯಸುತ್ತವೆ.ಇದಕ್ಕಾಗಿಯೇ ವಿಪಕ್ಷಗಳ ಸದಸ್ಯರು ಕಾಯುತ್ತಿದ್ದಾರೆ. ಐದು ದಿನ ಕಳೆದರೂ ಪ್ರಧಾನಿಯವರು ಸದನಕ್ಕೆ ಬಂದಿಲ್ಲ. ಅವರು ತಮ್ಮ ಕಚೇರಿಯಿಂದಲೇ ಕಲಾಪವನ್ನು ವೀಕ್ಷಿಸುತ್ತಿದ್ದಾರೆ ಎಂದು ಖರ್ಗೆ ಹೇಳಿದರು.
