ಉದಯವಾಹಿನಿ, ತುಮಕೂರು: 40 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಪಿಎಸ್‌ಐ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತುಮಕೂರು ಗ್ರಾಮಾಂತರ ಠಾಣೆ ಪಿಎಸ್‌ಐ ಚೇತನ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದವರು. ಠಾಣೆ ವ್ಯಾಪ್ತಿಯಲ್ಲಿ ಕಾರೊಂದನ್ನು ವಶಕ್ಕೆ ಪಡೆದಿದ್ದ ಪಿಎಸ್‌ಐ ಚೇತನ್ ಕುಮಾರ್, ಕಾರಿನಲ್ಲಿ ಅನುಮಾನಾಸ್ಪದ ವಸ್ತುಗಳು ಇವೆ ಎಂದು ಠಾಣೆಗೆ ತಂದಿದ್ದಾರೆ. ಬಳಿಕ ಕಾರು ಬಿಡದೇ ಪ್ರಕರಣವನ್ನೂ ದಾಖಲಿಸದೇ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರು ಮೂಲದ ವ್ಯಕ್ತಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. 1 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು 40 ಸಾವಿರ ರೂಪಾಯಿ ಫೈನಲ್ ಮಾಡಿದ್ದರು. ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಟೋಲ್‌ ಬಳಿ ಅಂಗಡಿಯೊಂದರಲ್ಲಿ ಹಣ ಕೊಡಲು ಪಿಎಸ್‌ಐ ಹೇಳಿದ್ದರು. ಅಂಗಡಿಗೆ ಹಣ ಕೊಡಲು ಬರುವವನ ಫೋಟೋವನ್ನು ಅಂಗಡಿಯವನಿಗೆ ರವಾನಿಸಿದ್ದರು. ಅಂಗಡಿಯವನ ಮೊಬೈಲ್ ಪರಿಶೀಲಿಸಿದಾಗ ಪಿಎಸ್‌ಐ ಪಾತ್ರ ಬಯಲಾಗಿದೆ. ಸದ್ಯ ಪಿಎಸ್‌ಐ ಚೇತನ್ ಕುಮಾರ್‌ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!