ಉದಯವಾಹಿನಿ, ಶ್ರೀನಗರ : ಉಗ್ರ ಧಮನಕ್ಕೆ ಆರಂಭಿಸಿರುವ ಆಪರೇಷನ್‌ ಟ್ರಾಶಿ-I 14ನೇ ದಿನಕ್ಕೆ ಕಾಲಿಟ್ಟಿದ್ದು, ಜಮ್ಮು ಕಾಶ್ಮೀರದ ಕಿಶ್ತ್ವಾರ್‌ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಶನಿವಾರ  ಭಾರತೀಯ ಯೋಧರು ಉಗ್ರರ ಅಡುಗುತಾಣವನ್ನು ಪತ್ತೆ ಹಚ್ಚಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಸದ್ಯ ಕಾರ್ಯಾಚರಣೆ ಮುಂದುವರಿದಿದ್ದು, ಉಗ್ರರನ್ನು ಸುತ್ತುವರಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.
2 ವಾರಗಳಿಂದ ಡೋಗ್ಲಾಮ್ ಪ್ರದೇಶದಲ್ಲಿ ಭಾರಿ ಶೋಧ ಕಾರ್ಯಾಚರಣೆ ನಡೆಸಿದ ನಂತರ, ಪಾಕಿಸ್ತಾನ ಮೂಲದ ಕಮಾಂಡರ್‌ಗಳಾದ ಸೈಫುಲ್ಲಾ ಮತ್ತು ಆದಿಲ್ ಸೇರಿದಂತೆ ಅನೇಕ ಭಯೋತ್ಪಾದಕರು ಅಡಗಿಕೊಂಡಿರುವುದನ್ನು ಪತ್ತೆಹಚ್ಚಿದ ಭದ್ರತಾ ಪಡೆಗಳು ಎನ್‌ಕೌಂಟರ್ ಪ್ರಾರಂಭಿಸಿದವು. ಭದ್ರತಾ ಪಡೆಗಳ ಮೇಲೆ ಮೊದಲು ಭಯೋತ್ಪಾದಕರು ದಾಳಿ ನಡೆಸುವ ಮೂಲಕ ಎನ್‌ಕೌಂಟರ್‌ ಆರಂಭವಾಯಿತು ಎಂದು ಮೂಲಗಳು ತಿಳಿಸಿವೆ. ತೀವ್ರ ಗುಂಡಿನ ಚಕಮಕಿ ಮುಂದುವರಿದಿದ್ದು, ಹೆಚ್ಚುವರಿ ಸಿಬ್ಬಂದಿಯನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೈಷ್‌-ಎ-ಮೊಹಮ್ಮದ್‌ ಸಂಘಟನೆಗೆ ಸೇರಿದ ಕನಿಷ್ಠ ಮೂವರು ಉಗ್ರರು ಅಡಗಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!