ಉದಯವಾಹಿನಿ , ಕೀವ್: ಉಕ್ರೇನ್ನ ಪಾವ್ಲೋಹ್ರಾಡ್ ಜಿಲ್ಲೆಯಲ್ಲಿ ಶನಿವಾರ ರಷ್ಯಾ ಡ್ರೋನ್ ಮೂಲಕ ದಾಳಿ ನಡೆಸಿದ್ದು, ಡ್ರೋನ್ ಗಣಿಗಾರರನ್ನು ಸಾಗಿಸುತ್ತಿದ್ದ ಸರ್ವಿಸ್ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ನ ರಾಜ್ಯ ತುರ್ತು ಸೇವೆ ತಿಳಿಸಿದೆ. X ನಲ್ಲಿ ಬಿಡುಗಡೆಯಾದ ಹೇಳಿಕೆಯ ಪ್ರಕಾರ, ದಾಳಿಯ ಬಳಿಕ ತೀವ್ರವಾಗಿ ಬೆಂಕಿ ಹತ್ತಿಕೊಂಡಿತು. ಆದರೆ ಅಗ್ನಿಶಾಮಕ ದಳದವರು ಅದನ್ನು ತಕ್ಷಣವೇ ನಂದಿಸಿದರು.
“ಪಾವ್ಲೋಹ್ರಾದ್ ಜಿಲ್ಲೆಯಲ್ಲಿ ಕಂಪನಿಯ ಸರ್ವಿಸ್ ಬಸ್ ಮೇಲೆ ರಷ್ಯಾದ ಡ್ರೋನ್ ದಾಳಿ ಮಾಡಿದೆ! ಪ್ರಾಥಮಿಕ ವರದಿಗಳು 15 ಜನರು ಸಾವನ್ನಪ್ಪಿದ್ದಾರೆ ಎಂದು ಸೂಚಿಸುತ್ತವೆ. ಇತರ ಏಳು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಕಿ ಕಾಣಿಸಿಕೊಂಡಿತು, ಅದನ್ನು ಅಗ್ನಿಶಾಮಕ ದಳದವರು ನಂದಿಸಿದರು” ಎಂದು ತುರ್ತು ಸೇವೆ ತನ್ನ ಪೋಸ್ಟ್ನಲ್ಲಿ ತಿಳಿಸಿದೆ. ಡಿಟಿಇಕೆ ಕಲ್ಲಿದ್ದಲು ಘಟಕದ ಬಳಿ ಕಂಪನಿಯ ಬಸ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದ್ದು, ಡಿಟಿಇಕೆ ಸಿಇಒ ಮ್ಯಾಕ್ಸಿಮ್ ಟಿಮ್ಚೆಂಕೊ ಈ ಘಟನೆಯನ್ನು “ಸಂಪೂರ್ಣವಾಗಿ ನಾಗರಿಕ ಗುರಿಯ ಮೇಲೆ ನಡೆದ ಅಪ್ರಚೋದಿತ ಭಯೋತ್ಪಾದಕ ದಾಳಿ” ಎಂದು ಬಣ್ಣಿಸಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಡ್ನಿಪ್ರೊ ಪ್ರದೇಶದಲ್ಲಿ, ರಷ್ಯಾದ ಡ್ರೋನ್ಗಳು ಗಣಿಗಾರರನ್ನು ಸಾಗಿಸುತ್ತಿದ್ದ ಸಾಮಾನ್ಯ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಅನೇಕ ಜನರು ಸಾವನ್ನಪ್ಪಿದರು. ಎಲ್ಲಾ ಕುಟುಂಬಗಳು ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು” ಎಂದು ಅವರು ಹೇಳಿದ್ದಾರೆ. ಮತ್ತೊಂದೆಡೆ, ಮುಂದಿನ ವಾರ ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಮಾತುಕತೆಗಳು ನಡೆಯಲಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್ನಿ ತಿಳಿಸಿದ್ದಾರೆ. ಆದರೆ, ಒಂದು ಕಡೆ ಮಾತುಕತೆಯ ಭರವಸೆ ನೀಡುತ್ತಿರುವಾಗಲೇ ಮತ್ತೊಂದೆಡೆ ಅಮಾಯಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಇಂತಹ ದಾಳಿಗಳು ಶಾಂತಿ ಸ್ಥಾಪನೆಗೆ ಅಡ್ಡಿಯಾಗುವ ಆತಂಕ ಮೂಡಿಸಿವೆ.
